ಶ್ರೀಕೃಷ್ಣ ಅಂದ್ರೆ ಕರಾರುರಹಿತ ಪ್ರೀತಿ, ಆಡಳಿತ ನಡೆಸಲು ದೇವರಿಂದ ಶಕ್ತಿ ಪಡೆದಿದ್ದೇನೆ: ಸಿಎಂ ಬೊಮ್ಮಾಯಿ

Public TV
1 Min Read

ಉಡುಪಿ: ಶ್ರೀಕೃಷ್ಣ ಆದರ್ಶ ವ್ಯಕ್ತಿ, ಶ್ರೀಕೃಷ್ಣ ಅಂದರೆ ಕರಾರು ರಹಿತ ಪ್ರೀತಿ, ದೇವತಾಪುರುಷ, ಮಾರ್ಗದರ್ಶಕ. ಅವನ ದರ್ಶನವೆಂದರೆ ಕರಗಿ ಲೀನವಾಗುವ ಪ್ರಕ್ರಿಯೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿ ಉಡುಪಿ ಜಿಲ್ಲೆಗೆ ಆಗಮಿಸಿದ ಬಸವರಾಜ ಬೊಮ್ಮಾಯಿ, ಪೊಡವಿಗೊಡೆಯ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರಿಂದ ಹಾಗೂ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭಗವದ್ಗೀತೆ ಜೀವನದ ಮಾರ್ಗದರ್ಶಕವಾಗಿದೆ. ಭಗವದ್ಗೀತೆ ನಮ್ಮೆಲ್ಲ ಜೀವನದ ಪ್ರಶ್ನೆಗಳಿಗೆ ಉತ್ತರ ಸಿಗುವ ಗ್ರಂಥ. ಶ್ರೀಕೃಷ್ಣ ಮಠಕ್ಕೆ ಬರುವುದು ಪುಣ್ಯಭಾಗ್ಯ. ಕೃಷ್ಣ ಕರೆಸಿಕೊಂಡರೆ ಮಾತ್ರ ಬರಲು ಸಾಧ್ಯ. ನಾಡಿನ ಜವಾಬ್ದಾರಿ ಹೊತ್ತ ಮೇಲೆ ದೇವರೇ ಕರೆಸಿದ್ದಾನೆ. ಕೋವಿಡ್ ಮಾರಿ ಎದುರಿಸಿ, ಕರ್ನಾಟಕ ಸುಭೀಕ್ಷ ಮಾಡಲು ದೇವರಲ್ಲಿ ಬೇಡಿದ್ದೇನೆ. ಆ ಅದಮ್ಯ ಶಕ್ತಿ ಪಡೆದಿದ್ದೇನೆ. ಅದಮಾರು ಸ್ವಾಮೀಜಿಯಲ್ಲಿ ನಿಖರತೆಯ ಜೊತೆಗೆ ನಾಡಿನ ಬಗ್ಗೆ ಹಂಬಲ ಕಂಡೆ. ಅವರ ಭೇಟಿ ನಂತರ ವಿಶೇಷ ಶಕ್ತಿ ಬಂದಿದೆ. ಪರಮಾತ್ಮನ ದಯೆಯಿಂದ ಸ್ಥಾನ ಸಿಕ್ಕಿದೆ. ದೇವರ ಆದರ್ಶ ಪಾಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಚಿವರಾದ ಡಾ. ಸುಧಾಕರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್ ಮೊದಲಾದವರಿದ್ದರು. ಅದಮಾರು ಸ್ವಾಮೀಜಿ ಅವರನ್ನು ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು. ಮುಖ್ಯಮಂತ್ರಿಗಳಿಗೆ ಮತ್ತು ಸಚಿವರಿಗೆ ಶಾಸಕರಿಗೆ ಪರಿಹಾರ ಮಾಡು ಮಠದಿಂದ ಗೌರವ ಸಮರ್ಪಣೆ ನಡೆಯಿತು.

Share This Article
Leave a Comment

Leave a Reply

Your email address will not be published. Required fields are marked *