ರಣಬೀರ್ ಕಪೂರ್ ಮುಖ್ಯ ಭೂಮಿಕೆಯ ಬ್ರಹ್ಮಾಸ್ತ್ರ ಸಿನಿಮಾದ ಮುಂದುವರೆದ ಭಾಗ ಕೂಡ ಅತೀ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದೆ ಎಂದು ಹೇಳಲಾಗಿತ್ತು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Alia Bhatt) ಕಾಂಬಿನೇಷನ್ ನ ಈ ಸಿನಿಮಾದಲ್ಲಿ ದೇವ್ ಎನ್ನುವ ಪ್ರಮುಖ ಪಾತ್ರವೊಂದು ಬರಲಿದ್ದು, ಈ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂದೂ ಹೇಳಲಾಗಿತ್ತು. ಅದರಲ್ಲೂ ಖುದ್ದಾಗಿ ನಿರ್ಮಾಪಕ ಕರಣ್ ಜೋಹಾರ್ ಮತ್ತು ನಿರ್ದೇಶಕ ಅಯಾನ್ ಮುಖರ್ಜಿ ಜೊತೆಯಾಗಿ ಬಂದು ಯಶ್ ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿತ್ತು.
ಕರಣ್ ಜೋಹಾರ್ (Karan Johar) ಮತ್ತು ಅಯಾನ್ ಬೆಂಗಳೂರಿಗೆ ಬಂದು ಯಶ್ (Yash) ಅವರನ್ನು ಭೇಟಿ ಮಾಡಿ, ಕಥೆ ಹೇಳಿದರೂ ಯಶ್ ಆ ಸಿನಿಮಾದಲ್ಲಿ ನಟಿಸಲು ಒಪ್ಪಿಲ್ಲ ಎಂದು ಹೇಳಲಾಗುತ್ತಿದೆ. ದೇವ್ ಈ ಸಿನಿಮಾದಲ್ಲಿ ಮಹತ್ವದ ಪಾತ್ರವಾದರೂ, ಯಶ್ ಅವರು ಕೇಳಿದಷ್ಟು ಸಂಭಾವನೆಯನ್ನು ಕೊಡಲು ಕರಣ್ ಸಿದ್ಧವಿದ್ದರೂ, ಆ ಪಾತ್ರವನ್ನು ತಾವು ಮಾಡುವುದಿಲ್ಲ ಎಂದು ಯಶ್ ಹೇಳಿರುವ ಸುದ್ದಿ ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ಯಶ್ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಇದನ್ನೂ ಓದಿ:ದೂದ್ ಪೇಡ ದಿಗಂತ್ ಗೆ ಜೊತೆಯಾದ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್
ಕೆಜಿಎಫ್ 2 ಸಿನಿಮಾದ ನಂತರ ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುರಿತು ಸಖತ್ ಚರ್ಚೆ ಶುರುವಾಗಿದೆ. ಯಾವಾಗ ಯಶ್ ಸಿನಿಮಾ ಶುರುವಾಗಲಿದೆ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಈ ಹೊತ್ತಿನಲ್ಲಿ ಯಶ್ ಬ್ರಹ್ಮಾಸ್ತ್ರ (Brahmastra) ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳಿಗೆ ಖುಷಿ ಸಂಗತಿ ಆಗಿತ್ತು. ಆದರೆ, ಆ ಸಿನಿಮಾದಲ್ಲೂ ಯಶ್ ನಟಿಸುತ್ತಿಲ್ಲ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಇತ್ತ ಬೇರೆ ಸಿನಿಮಾವನ್ನೂ ಯಶ್ ಒಪ್ಪಿಕೊಂಡಿಲ್ಲ ಎನ್ನಲಾಗುತ್ತಿದೆ. ಅವರ ಸಿನಿಮಾಗೆ ಬಂಡವಾಳ ಹೂಡಲು ಹಲವು ಕಂಪೆನಿಗಳು ಮುಂದೆ ಬಂದರೂ, ಇನ್ನೂ ಯಶ್ ಕತೆ ಒಪ್ಪಿಕೊಂಡಿಲ್ಲವಂತೆ. ಅಲ್ಲದೇ, ನಿರ್ದೇಶಕರಿಗಾಗಿಯೂ ಹುಡುಕಾಟ ಶುರು ಮಾಡಿದ್ದಾರಂತೆ. ಕಥೆ ಮತ್ತು ನಿರ್ದೇಶಕರು ಪಕ್ಕಾ ಆದ ನಂತರವೇ ಹೊಸ ಸಿನಿಮಾದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ ಎನ್ನುವುದು ನಯಾ ಸಮಾಚಾರ. ಅಂದುಕೊಂಡಂತೆ ಆಗಿದ್ದರೆ ನರ್ತನ್ ಜೊತೆಗಿನ ಸಿನಿಮಾ ಇಷ್ಟೊತ್ತಿಗಾಗಲೇ ಸೆಟ್ಟೇರಬೇಕಿತ್ತು. ಅದು ಕೂಡ ಆಗಿಲ್ಲ ಎನ್ನುವುದು ನಿರಾಸೆ ಸಂಗತಿ.