ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಯಿಂದ ಆರ್ಯವರ್ಧನ್ ಪಾತ್ರಧಾರಿ, ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರನ್ನು ಕೈ ಬಿಡಲಾಗಿದೆ ಎನ್ನುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಶೂಟಿಂಗ್ ಸ್ಪಾಟ್ ನಲ್ಲೇ ಅವರು ನಿರ್ಮಾಪಕ ಕಂ ನಿರ್ದೇಶಕರ ಜೊತೆ ಕಿರಿಕ್ ಮಾಡಿಕೊಂಡರು ಅನ್ನುವ ಕಾರಣಕ್ಕಾಗಿ ಈ ರೀತಿ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಹಲವು ಬಾರಿ ಇದೇ ರೀತಿ ಅನಿರುದ್ಧ ಅವರು ತಂಡದೊಂದಿಗೆ ನಡೆದುಕೊಂಡಿದ್ದಾರೆ ಅನ್ನುವ ಕಾರಣಕ್ಕಾಗಿಯೇ ಕಿರುತೆರೆಯಿಂದಲೇ ಅವರನ್ನು ಬ್ಯಾನ್ ಮಾಡಲಾಗುತ್ತಿದೆ ಎನ್ನುವ ಸುದ್ದಿಯೂ ಹರಡಿದೆ.
ಈ ಪ್ರಕರಣದ ಕುರಿತಂತೆ ಈಗಾಗಲೇ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ಗೆ ಕಂಪ್ಲೆಂಟ್ ಕೂಡ ಮಾಡಿದ್ದು ಅನಿರುದ್ಧ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ ಎನ್ನುವ ಮಾತೂ ಕೇಳಿ ಬಂದಿತ್ತು. ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ವಿಷಯದ ಕುರಿತು ಯಾವುದೇ ಮಾಹಿತಿ ಕೂಡ ತಮಗೆ ಗೊತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ:ರಾಜ್ಯಪಾಲರಾಗ್ತಾರಾ ಸೂಪರ್ ಸ್ಟಾರ್ ರಜನಿಕಾಂತ್?
“ಒಂದು ಸೀರಿಯಲ್ ನಿಂದ ಕಲಾವಿದರು ಬದಲಾಗುವುದು ಕಾಮನ್. ಆದರೆ, ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಏನಾಗಿದೆ ಎನ್ನುವುದು ಗೊತ್ತಿಲ್ಲ. ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಗೂ ಯಾವುದೇ ದೂರು ಕೂಡ ಬಂದಿಲ್ಲ. ಹಾಗೇನಾದರೂ ಬಂದರೆ, ಕೂರಿಸಿ ಮಾತನಾಡುತ್ತೇವೆ. ಉದ್ಯಮದ ಉಳುವಿಗಾಗಿಯೇ ನಮ್ಮ ಸಂಘಟನೆ ಇರುವುದು. ವೈಯಕ್ತಿಕವಾಗಿ ಜೊತೆ ಜೊತೆಯಲಿ ಧಾರಾವಾಹಿಯ ನಿರ್ದೇಶಕರು, ನಿರ್ಮಾಪಕರು ಹಾಗೂ ನಟ ಅನಿರುದ್ಧ ಅವರು ಹಲವು ವರ್ಷಗಳಿಂದ ಪರಿಚಿತರು. ಹಾಗೆ ಆಗಿರಲಿಕ್ಕಿಲ್ಲ ಎಂದು ಭಾವಿಸುವೆ’ ಎಂದಿದ್ದಾರೆ ಎಸ್.ವಿ. ಶಿವಕುಮಾರ್.