– ಬಿಜೆಪಿ ಕಾರ್ಯಕರ್ತನಿಂದಲೇ ಬಿಜೆಪಿಗೆ ಮುಖಭಂಗ
ಶಿವಮೊಗ್ಗ: ಬೆಲೆ ಏರಿಕೆ ಖಂಡಿಸಿ ಬಿಜೆಪಿ ಬೂತ್ ಅಧ್ಯಕ್ಷ ಶೇಖರ್ ಅವರು ನಾಮಫಲಕ ತಿರಸ್ಕಾರ ಮಾಡಿ, ಸ್ಥಳದಲ್ಲೇ ಪಕ್ಷಕ್ಕೆ ರಾಜೀನಾಮೆ ನೀಡಿದ ಘಟನೆ ನಡೆದಿದೆ. ಈ ಮೂಲಕ ಬಿಜೆಪಿ ಕಾರ್ಯಕರ್ತರಿಂದಲೇ ಪಕ್ಷಕ್ಕೆ ಮುಖಭಂಗ ಆದಂತಾಗಿದೆ.
ನಗರದ ಅಶೋಕನಗರದಲ್ಲಿ ಬಿಜೆಪಿ ವತಿಯಿಂದ ವಾರ್ಡ್ ಅಧ್ಯಕ್ಷರ ಮನೆ ಬಾಗಿಲಿಗೆ ತೆರಳಿ ನಾಮಫಲಕವನ್ನು ವಿತರಿಸುವ ಕಾರ್ಯಕ್ರಮ ನಡೆಯುತ್ತಿತ್ತು. ವಾರ್ಡ್ ನಂ.26ರ ಬೂತ್ ಸಂಖ್ಯೆ 199ರ ಅಧ್ಯಕ್ಷರಾಗಿದ್ದ ಶೇಖರ್ ಅವರ ಮನೆಗೆ ನಾಮಫಲಕವನ್ನು ನೀಡುವ ಉದ್ದೇಶದಿಂದ ಬಿಜೆಪಿ ಮುಖಂಡರು ತೆರಳಿದ್ದರು. ಈ ಸಮಯದಲ್ಲಿ ನಾಮಫಲಕವನ್ನು ತಿರಸ್ಕಾರ ಮಾಡುವುದರ ಜೊತೆಗೆ ನಾಮಫಲಕ ನೀಡಲು ಬಂದವರ ಕೈಗೆ ಸ್ಥಳದಲ್ಲಿಯೇ ರಾಜೀನಾಮೆ ಪತ್ರವನ್ನು ಶೇಖರ್ ನೀಡಿದ್ದಾರೆ. ಇದರಿಂದ ಬಿಜೆಪಿ ಮುಖಂಡರಿಗೆ ಇರುಸು-ಮುರುಸು ಉಂಟಾಗಿದೆ. ಇದನ್ನೂ ಓದಿ: ಮೈಸೂರಲ್ಲಿ ನಡೆದ ಗ್ಯಾಂಗ್ರೇಪ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು: ಸಿ.ಟಿ ರವಿ
ಘಟನೆಗೆ ಸಂಭಂದಿಸಿದಂತೆ ಪ್ರತಿಕ್ರಿಯೆ ನೀಡಿರುವ ಶೇಖರ್, ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಜನಸಾಮಾನ್ಯರಿಗೆ ಅಭಿವೃದ್ಧಿಯ ವಿಷಯವಾಗಿ ನೂರಾರು ಭರವಸೆಗಳನ್ನು ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ತನ್ನ ಹೇಳಿಕೆಗೆ ವ್ಯತಿರಿಕ್ತ ಎನ್ನುವ ಹಾಗೆ ಪೆಟ್ರೋಲ್, ಡೀಜಲ್, ಅಡುಗೆ ಅನಿಲ, ಸೇರಿದಂತೆ ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿಸಿದೆ. ಈ ಕಾರಣ ನಾವು ಜನರ ಮಧ್ಯದಲ್ಲಿ ಪಕ್ಷದ ಪರವಾಗಿ ಮಾತನಾಡಲು ಹೋದಾಗ ನಾವು ಜನರಿಗೆ ಉತ್ತರ ನೀಡಲು ಕಷ್ಟವಾಗುತ್ತಿದೆ. ಅದೆಷ್ಟೋ ಬಾರಿ ಜನರಿಂದ ಅವಮಾನಕ್ಕೆ ಒಳಗಾಗಬೇಕಾಗಿದೆ. ಈ ಕಾರಣಕ್ಕೆ ನಾನು ಬಿಜೆಪಿ ಸದಸ್ಯತ್ವ ಹಾಗೂ ಬೂತ್ ಅಧ್ಯಕ್ಷ ಸ್ಥಾನಕ್ಕೆ ಬಹಿರಂಗವಾಗಿ ಜನರ ಎದುರಲ್ಲೇ ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.