ಬೆಂಗಳೂರು: ಮಲ್ಪೆ ಬೀಚ್ನಲ್ಲಿ ಫ್ಲೋಟಿಂಗ್ ಬ್ರಿಡ್ಜ್ ಮುರಿಯಲು ತಾಂತ್ರಿಕ ಕಾರಣ ಇರಬೇಕು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಉಡುಪಿಯ ಮಲ್ಪೆ ಬೀಚ್ನಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ತೇಲುವ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಅರಬ್ಬೀ ಸಮುದ್ರದ ಅಬ್ಬರ ಜೋರಾಗಿರುವುದರಿಂದ ಸೇತುವೆ ಮುರಿದು ಬಿದ್ದಿದೆ. ಇದು ಕರ್ನಾಟಕ ರಾಜ್ಯದಲ್ಲೇ ಪ್ರಥಮ ತೇಲುವ ಸೇತುವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಕಳೆದ 2 ದಿನಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ, ಈ ತೇಲುವ ಸೇತುವೆ ಇದೀಗ ಸ್ಥಗಿತಗೊಂಡಿದೆ. ಪ್ರವಾಸಿಗರ ಆಕರ್ಷಣೆಗೆ ನಿರ್ಮಾಣವಾಗಿದ್ದ ಮಲ್ಪೆಯ ತೇಲುವ ಸೇತುವೆ ಸ್ಥಗಿತ
ಸದ್ಯ ಈ ಕುರಿತಂತೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆನಂದ್ ಸಿಂಗ್ ಅವರು, ಫ್ಲೋಟಿಂಗ್ ಬ್ರಿಡ್ಜ್ ಮುರಿಯಲು ನಿಖರ ಕಾರಣ ತಿಳಿದುಬಂದಿಲ್ಲ. ಸೇತುವೆ ಮುರಿಯಲು ತಾಂತ್ರಿಕ ಕಾರಣ ಇರಬೇಕು. ಸಮುದ್ರದ ಅಲೆ ತೀವ್ರ ಇದ್ದಾಗ ಇಂಥ ಬ್ರಿಡ್ಜ್ಗಳು ನಿಲ್ಲಲ್ಲ. ಹೆಚ್ಚು ದಿನಗಳ ಕಾಲ ಫ್ಲೋಟಿಂಗ್ ಬ್ರಿಡ್ಜ್ ಬಾಳಿಕೆ ಬರುವುದಿಲ್ಲ ಎಂದಿದ್ದಾರೆ.
ಮೂವರು ಉದ್ಯಮಿಗಳ ಬಂಡವಾಳದಿಂದ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಅಲ್ಲದೇ ಜಿಲ್ಲಾಡಳಿತದ ಅನುಮತಿಯೊಂದಿಗೆ ಉದ್ಯಮಿಗಳಿಂದ ಸೇತುವೆ ನಿರ್ಮಾಣ ಮಾಡಿ ಖಾಸಗಿ ನಿರ್ವಹಣೆಯ ತೇಲುವ ಸೇತುವೆ ಇದೆ. ಮಲ್ಪೆ ಬೀಚ್ನಲ್ಲಿ ನಿರ್ಮಿಸಲಾಗಿರುವ ಈ ತೇಲುವ ಸೇತುವೆಯು 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲ ಹೊಂದಿದ್ದು, 80 ಲಕ್ಷ ವೆಚ್ಚದಲ್ಲಿ ಸಿದ್ಧಪಡಿಸಲಾಗಿತ್ತು.
40% ಬಿಜೆಪಿಯ ಪಾಲು,
60% ಗಾಳಿ, ಸಮುದ್ರದ ಪಾಲು
ರಾಜ್ಯದ ಅಭಿವೃದ್ಧಿ ಮಣ್ಣುಪಾಲು
ಜನರ ಬದುಕು ಬೀದಿಪಾಲು!
ಬಿಜೆಪಿ ಸರ್ಕಾರ ವಿಧಾನ ಸೌಧವನ್ನು “ವ್ಯಾಪಾರ ಸೌಧ” ಮಾಡಿರುವಾಗ ‘ಅಭಿವೃದ್ಧಿ’ ಎನ್ನುವುದು ಗಾಳಿಯಲ್ಲಿ ಹಾರಿ ಹೋಗುತ್ತಿದೆ, ಸಮುದ್ರದಲ್ಲೂ ತೇಲಿ ಹೋಗುತ್ತಿದೆ. pic.twitter.com/JEdWurrfhr
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 10, 2022
ಮತ್ತೊಂದೆಡೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ಇದರಲ್ಲಿ ಬಿಜೆಪಿ 40% ಕಮೀಷನ್ ಪಡೆದಿದೆ ಎಂದು ಆರೋಪಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, 40% ಬಿಜೆಪಿಯ ಪಾಲು, 60% ಗಾಳಿ, ಸಮುದ್ರದ ಪಾಲು, ರಾಜ್ಯದ ಅಭಿವೃದ್ಧಿ ಮಣ್ಣುಪಾಲು, ಜನರ ಬದುಕು ಬೀದಿಪಾಲು. ಬಿಜೆಪಿ ಸರ್ಕಾರ ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡಿರುವಾಗ ‘ಅಭಿವೃದ್ಧಿ’ ಎನ್ನುವುದು ಗಾಳಿಯಲ್ಲಿ ಹಾರಿ ಹೋಗುತ್ತಿದೆ, ಸಮುದ್ರದಲ್ಲೂ ತೇಲಿ ಹೋಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.