-ಬಿದ್ದೋದ ಮನೆಯಲ್ಲಿ 5 ತಿಂಗಳಿನಿಂದ ವಾಸ
ದಾವಣಗೆರೆ: ಸಿಡಿಲು ಬಡಿದು ಮನೆಯನ್ನು ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಬಡ ಕುಟುಂಬವೊಂದು ಬೀದಿಯಲ್ಲಿ ಜೀವನ ಮಾಡುವ ಪರಿಸ್ಥಿತಿ ಎದುರಾಗಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಳೆದ ಐದು ತಿಂಗಳ ಹಿಂದೆ ಕೂಲಿ ಕೆಲಸ ಮಾಡುತ್ತಿದ್ದ ಶಿವಪ್ಪ ಎನ್ನುವರ ಮನೆಗೆ ಸಿಡಿಲು ಬಡಿದಿತ್ತು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಚಿನ್ನಾಭರಣ, ಹಣ ಹಾಗೂ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು. ಇಡೀ ಕುಟುಂಬವೇ ಬೀದಿಗೆ ಬಿದ್ದಂತಾಯಿತು.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕೇವಲ ಐದು ಸಾವಿರ ರೂ. ನೀಡಿ ಕೈ ತೊಳೆದುಕೊಂಡಿದ್ದಾರೆ. ಉಟ್ಟಬಟ್ಟೆಯಲ್ಲಿ ಮನೆಯಿಂದ ಬಂದು ಜೀವ ಉಳಿಸಿಕೊಂಡ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಸಿಗದೇ ಬೀದಿಗೆ ಬಿದ್ದಿದ್ದಾರೆ. ಮಾಯಕೊಂಡ ಕ್ಷೇತ್ರದ ಶಾಸಕ ಪ್ರೋ. ಲಿಂಗಣ್ಣನವರ ಮನೆ ಬಾಗಿಲು ಕಾದರೂ ಕೂಡ ಶಾಸಕರಿಗೆ ಬಡ ಕುಟುಂಬದ ಮೇಲೆ ಕರುಣೆ ಎನ್ನುವುದೇ ಬಂದಿಲ್ಲ.
ಕಳೆದ ಐದು ತಿಂಗಳಿಂದ ಯಾವುದೋ ಬಿದ್ದೋದ ಮನೆಯಲ್ಲಿ ವೃದ್ಧ ದಂಪತಿ ಜೀವನ ನಡೆಸುತ್ತಿದ್ದು, ಸರ್ಕಾರ ಮಾತ್ರ ಇವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ವೃದ್ಧ ದಂಪತಿ ನಮಗೆ ವಿಷವಾದರೂ ಕೊಡಿ ಎಂದು ಅಂಗಲಾಚುತ್ತಿದ್ದಾರೆ. ಅಲ್ಲದೆ ಸಿಡಿಲು ಬಡಿದ ರಭಸಕ್ಕೆ ಶಿವಪ್ಪನ ಪತ್ನಿ ಕರಿಯಮ್ಮನಿಗೆ ತಲೆಗೆ ಪೆಟ್ಟು ಬಿದ್ದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ.