ನವದೆಹಲಿ: ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚುವುದಾಗಿ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಇಂದು ಘೋಷಿಸಿದರು.
ಮಾಲಿನ್ಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಪ್ರಸ್ತುತ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ದೆಹಲಿಯ ಎಲ್ಲ ಶಾಲೆಗಳನ್ನು ನಾಳೆಯಿಂದ ಮುಂದಿನ ಆದೇಶದವರೆಗೆ ಮುಚ್ಚಲಾಗುವುದು ಎಂದು ಹೇಳಿದರು.
ಗಾಳಿಯ ಗುಣಮಟ್ಟ ಸುಧಾರಿಸುತ್ತಿದ್ದ ಮುನ್ಸೂಚನೆಯಿಂದ ನಾವು ಶಾಲೆಗಳನ್ನು ಪುನರಾರಂಭಿಸಿದ್ದೆವು. ಆದರೆ ಈಗ ಮತ್ತೆ ವಾಯುಮಾಲಿನ್ಯದ ಮಟ್ಟವು ಹೆಚ್ಚಾಗಿದೆ. ಈ ಹಿನ್ನೆಲೆ ನಾಳೆಯಿಂದ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ನನಗೆ ಮತ ಹಾಕದಂತೆ ಜೆಡಿಎಸ್ ಮುಖಂಡರು ಬೆದರಿಕೆ ಹಾಕ್ತಿದ್ದಾರೆ: ಎಂ.ಶಂಕರ್ ಆರೋಪ
ನವೆಂಬರ್ 13ರಲ್ಲಿಯೂ ಶಾಲಾ-ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದ್ದು, ಸೋಮವಾರದಿಂದ ಪ್ರಾರಂಭಿಸಲಾಗಿತ್ತು. ಈ ಹಿನ್ನೆಲೆ ದೈಹಿಕ ತರಗತಿಗಳನ್ನು ಪುನರಾರಂಭಿಸುವಂತೆ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಕೇಳಿದ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಈ ವೇಳೆ ಸುಪ್ರೀಂ ಕೋರ್ಟ್ ದೆಹಲಿಯ ಎನ್ಸಿಆರ್ನಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಕುರಿತು ಕೇಂದ್ರ ಮತ್ತು ದೆಹಲಿಯನ್ನು ತರಾಟೆಗೆ ತೆಗೆದುಕೊಂಡಿತು. ನಾವು, ನಿಮ್ಮ ಅಧಿಕಾರಶಾಹಿಯಲ್ಲಿ ಸೃಜನಶೀಲತೆಯನ್ನು ತುಂಬಲು ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಅಧಿಕಾರಿಗಳು ಮಾಲಿನ್ಯವನ್ನು ನಿಯಂತ್ರಿಸಲು ವಿಫಲವಾದರೆ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದೆ. ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ
ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ವಿಶೇಷ ಪೀಠವು ಮಾಲಿನ್ಯ ಮಟ್ಟವನ್ನು ತಗ್ಗಿಸಲು ಗಂಭೀರ ಕ್ರಮಗಳನ್ನು ನಿರೀಕ್ಷಿಸುವುದಾಗಿ ಹೇಳಿದೆ.