ಶ್ರೀನಗರ: ಇಂದು ನಡೆದ ಕಾಶ್ಮೀರಿ ಪಂಡಿತನ ಹತ್ಯೆ ಬಳಿಕ ಮತ್ತಷ್ಟು ದಾಳಿಗಳು ನಡೆಯುವ ಸಾಧ್ಯತೆಯಿದೆ ಎಂದು ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆಯನ್ನು ನೀಡಿದೆ.
ಸ್ವಾತಂತ್ರ್ಯೋತ್ಸವದಂದು ಕಾಶ್ಮೀರದಲ್ಲಿ ರಾಷ್ಟ್ರ ಧ್ವಜಾರೋಹಣ ಹಾಗೂ ವಿವಿಧ ಸ್ಥಳಗಳಲ್ಲಿ ತಿರಂಗಾ ರ್ಯಾಲಿಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಭಯೋತ್ಪಾದಕ ಸಂಘಟನೆಗಳು ಮತ್ತೆ ದಾಳಿ ನಡೆಸುವ ಸಾಧ್ಯತೆಯಿದೆ. ಅದರಲ್ಲೂ ವಿಶೇಷವಾಗಿ ಕಾಶ್ಮೀರೇತರರ ಮೇಲೆ ದಾಳಿ ಆಗಬಹುದು ಎಂದು ಕೇಂದ್ರ ಸಚಿವಾಲಯದ ಮೂಲಗಳು ತಿಳಿಸಿವೆ.
ಇಂದು ಶೋಪಿಯಾನ್ ಜಿಲ್ಲೆಯ ಸೇಬಿನ ತೋಟದಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಕಾಶ್ಮೀರಿ ಪಂಡಿತನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆತನ ಸಹೋದರ ದಾಳಿ ವೇಳೆ ಗಾಯಗೊಂಡಿದ್ದರು. ಈ ದಾಳಿಯನ್ನು ಅಲ್ ಬದ್ರ್ನ ಶಾಖೆಯಾದ ಕಾಶ್ಮೀರ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ್ದಾರೆ ಎನ್ನಲಾಗುತ್ತಿದ್ದು, ತಿರಂಗಾ ರ್ಯಾಲಿಗಳಲ್ಲಿ ಭಾಗವಹಿಸಲು ಜನರನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಈ ಪಂಡಿತ ಸಹೋದರರ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
1990ರ ದಶಕದಲ್ಲಿ ಕಾಶ್ಮೀರದಿಂದ ಎಂದಿಗೂ ವಲಸೆ ಹೋಗದ ಕುಟುಂಬಗಳಲ್ಲಿ ಹತ್ಯೆಯಾದ ಸುನಿಲ್ ಕುಮಾರ್ ಅವರ ಕುಟುಂಬವೂ ಒಂದಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಮೇಲೆ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಕಾಶ್ಮೀರವನ್ನು ಬಿಟ್ಟು ಬನ್ನಿ: ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿ ಒತ್ತಾಯ
ಘಟನೆಗೆ ಸಂಬಂಧಿಸಿ ಗುಪ್ತಚರ ಇಲಾಖೆ ಇನ್ನಷ್ಟು ಮಾಹಿತಿ ನೀಡಿದ್ದು, ಗಡಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಮದ್ದು ಗುಂಡುಗಳು ಕಳ್ಳ ಸಾಗಣೆಯಾಗಿವೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಹತ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಈ ರೀತಿಯ ಘಟನೆಗಳನ್ನು ತರಬೇತಿ ಇಲ್ಲದವರೂ ಸೇರಿದಂತೆ ಯಾರು ಬೇಕಾದರೂ ನಡೆಸಬಹುದಾಗಿದೆ. ಈ ಉಗ್ರರು ಜನಪ್ರತಿನಿಧಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಮತ್ತೆ ಪಂಡಿತರು ಟಾರ್ಗೆಟ್ – ಓರ್ವನ ಹತ್ಯೆ, ಮತ್ತೋರ್ವ ಗಂಭೀರ