ಈಗಾಗಲೇ ಕೃಷ್ಣ ಲೀಲಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ನಟ ಅಜಯ್ ರಾವ್ (Ajay Rao), ಇದೀಗ ಮತ್ತೊಂದು ಸಿನಿಮಾವನ್ನು ತಯಾರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಬಾರಿ ಹೊಸ ಹುಡುಗರಿಗೆ ಅವರು ಮನೆ ಹಾಕಿದ್ದು, ಹೊಸ ಬಗೆಯ ಸಿನಿಮಾವನ್ನು ಕನ್ನಡದ ಪ್ರೇಕ್ಷಕರಿಗೆ ನೀಡಲು ಮುಂದೆ ಬಂದಿದ್ದಾರೆ. ಈ ಚಿತ್ರದ ಮೂಲಕ ಹೊಸ ಹುಡುಗರು ಸಿನಿಮಾ ರಂಗಕ್ಕೆ ಪರಿಚಯವಾಗುತ್ತಿರುವುದು ವಿಶೇಷ.
ಚಂದನವನದ ಪ್ರತಿಭಾವಂತ ನಟ ಅಜಯ್ ರಾವ್ ಹೊಸದೊಂದು ಸಿನಿಮಾಗೆ ಸಜ್ಜಾಗುತ್ತಿದ್ದು, ಪವನ್ ಭಟ್ (Pawan Bhatt) ನಿರ್ದೇಶನದ ಚಿತ್ರದಲ್ಲಿ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ನಿರ್ಮಾಣವನ್ನು ಅಜಯ್ ರಾವ್ ಮಾಡುತ್ತಿದ್ದು, ಈ ಮೂಲಕ ಕೃಷ್ಣ ಲೀಲಾ (Krishna Leela) ಸಿನಿಮಾ ನಂತರ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಮುಂದಾಗುತ್ತಿರುವುದು ವಿಶೇಷ. ಇದನ್ನೂ ಓದಿ:ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾದ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್
ನಿರ್ದೇಶಕ ಪವನ್ ಭಟ್ ಕಥೆ ಕೇಳಿ ಇಂಪ್ರೆಸ್ ಆಗಿರುವ ಅಜಯ್ ರಾವ್ ತಮ್ಮದೇ ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣ ಮಾಡಲು ಡಿಸೈಡ್ ಮಾಡಿದ್ದಾರೆ. ‘ಕಟಿಂಗ್ ಶಾಪ್’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಪವನ್ ಭಟ್ ಎರಡನೇ ಸಿನಿಮಾವಿದು. ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು ಹೊಸ ಕಲಾವಿದರಿಗಾಗಿ ಹುಡುಕಾಟ ನಡೆಸುತ್ತಿದೆ. ಸದ್ಯದಲ್ಲೇ ಟೈಟಲ್ ಹಾಗೂ ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ.