ಬೆಂಗಳೂರು: ಆರ್ಎಸ್ಎಸ್ಗೆ ಗೊತ್ತಾಗಿದೆ ಈ ಹೋರಾಟದಲ್ಲಿ ಸೋಲಾಗುತ್ತೆ ಅಂತಾ ಹಾಗಾಗಿ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೋರ್ಟ್ನಲ್ಲಿಯೂ ಜ್ಞಾನವಾಪಿ ವಿಚಾರದಲ್ಲಿ ಸೋಲಾಗುತ್ತೆ ಅಂತಾ ಗೊತ್ತಿದೆ. ಮೋದಿ ಸರ್ಕಾರ ಛೂ ಬಿಟ್ಟು ಈ ಹೇಳಿಕೆ ಕೊಡಿಸಿರೋದು. ರಾಷ್ಟ್ರದ ನೆಮ್ಮದಿ ಹಾಳಾಗಿದೆ ಹಾಗಾಗಿ ಇದು ಕೇಂದ್ರ ಸರ್ಕಾರದ ಪ್ಲಾನ್. ಭಾಗವತ್ ಹೇಳಿಕೆ ಹಿಂದೆ ಇರೋದು ಬ್ಯುಸಿನೆಸ್ ಮೈಂಡ್. ಕುವೈತ್, ಯುಐ, ಸೌದಿಯ ಮುಸ್ಲಿಂ ರಾಷ್ಟ್ರಗಳ ಜೊತೆ ವ್ಯಾವಹಾರಿಕ ಒಪ್ಪಂದ ಇದೆ. ದೇಶದಲ್ಲಿ ಮಸೀದಿ ಒಡೆದು ಹಾಕಿದ್ರೇ ಮುಸ್ಲಿಂ ರಾಷ್ಟ್ರಗಳು ಸುಮ್ಮನಿರುತ್ತಾ? ಬ್ಯುಸಿನೆಸ್ ಮಾಡೋಕೆ ಬರಲ್ಲ. ಹಾಗಾಗಿ ಈ ಹೇಳಿಕೆ ಕೊಟ್ಟಿರೋದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕಬೇಕಿಲ್ಲ, ಇನ್ಮುಂದೆ ಮಂದಿರ ಹೋರಾಟದಲ್ಲಿ ನಾವಿಲ್ಲ: ಮೋಹನ್ ಭಾಗವತ್
ಆರ್ಎಸ್ಎಸ್ ಹೇಳಿಕೆ ಕೊಟ್ರು ಅಂತಾ ನಾವು ಕುಣಿಯೋಕೆ ಆಗಲ್ಲ. ಒಂದೇ ಒಂದು ಮಸೀದಿಯನ್ನು ನಾವು ಬಿಟ್ಟುಕೊಡಲ್ಲ. ಆಯೋಧ್ಯೆ ಬಿಟ್ಟುಕೊಟ್ಟಿದ್ದೇವೆ ಇನ್ನು ಯಾವುದೇ ಮಸೀದಿಯನ್ನು ಬಿಟ್ಟುಕೊಡಲ್ಲ. ಶ್ರೀರಂಗಪಟ್ಟಣಕ್ಕೆ ಹಿಂದೂ ಸಂಘಟನೆ ಚಲೋ ಮಾಡಿದ್ರೇ ಅಲ್ಲಿನ ಜನರೇ ನಿಮ್ಮನ್ನು ಹೊರಗಡೆ ಹಾಕ್ತಾರೆ ಹುಷಾರ್. ಅಲ್ಲಿನ ಹಿಂದೂ ಸಮಾಜ ಎಚ್ಚೆತ್ತುಕೊಂಡಿದೆ. ಸುಮ್ನೆ ಹೋಗಿ ಅರೆಸ್ಟ್ ಯಾಕೆ ಆಗ್ತೀರಾ? ಒಬ್ರೂ ನಾಳೆ ಶ್ರೀರಂಗಪಟ್ಟಣಕ್ಕೆ ಹೋಗೋಕೆ ಆಗಲ್ಲ. ಅಲ್ಲಿ ಏನು ನಡೆಯಲ್ಲ ಎಂದು ಗುಡುಗಿದ್ದಾರೆ.
ಆರ್ಎಸ್ಎಸ್ ಹಿಂದೂಗಳ ಪ್ರಥಮ ಸಂಘಟನೆ. ಇವ್ರೇ ಈಗ ಈ ಹೋರಾಟದಿಂದ ಹಿಂದೆ ಸರಿದಿದ್ದಾರೆ. ಈಗ ಇನ್ನುಳಿದ ಸಂಘಟನೆ ಏನ್ ಮಾಡ್ತಾರೆ? ಮೋಹನ್ ಭಾಗವತ್ ಹೇಳಿಕೆಗೆ ಗೌರವ ಕೊಟ್ಟು ಸುಮ್ಮನಿರಿ ಸಾಕು. ಹೊಸ ವಿವಾದಗಳು ನಮ್ಮ ರಾಜ್ಯಕ್ಕೂ, ರಾಷ್ಟ್ರಕ್ಕೂ ಬೇಡ. ಮಸೀದಿಯಲ್ಲಿ ಸಿಕ್ಕಿರುವುದು ಕಾರಂಜಿ, ಶಿವಲಿಂಗ ಅಲ್ಲ ಎಂದು ಆರ್ಎಸ್ಎಸ್ಗೆ ಸರಿಯಾಗಿ ಗೊತ್ತಿದೆ. ಕೋರ್ಟ್ನಲ್ಲೂ ಕೂಡ ಆರ್ಎಸ್ಎಸ್ಗೆ ಸೋಲಾಗುತ್ತದೆ. ದೇಶದ ಅಭಿವೃದ್ದಿಗೆ ಈ ವಿವಾದ ಒಳ್ಳೆಯದಲ್ಲ. ದೇವಸ್ಥಾನಗಳಲ್ಲಿ ನೀವು ಪೂಜೆ ಮಾಡಿ ನಮ್ಮನ್ನು ಮಸೀದಿಯಲ್ಲಿ ನಮಾಜ್ ಮಾಡಲು ಬಿಟ್ಟಿಬಿಡಿ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಸುಧಾರಣೆ, ಸಾಧನೆ ಮತ್ತು ರೂಪಾಂತರ ಮಂತ್ರದ ಮೇಲೆ ಭಾರತ ಪ್ರಗತಿ ಸಾಧಿಸಿದೆ: ಮೋದಿ