ಗದಗ: ಬೇಕರಿ ತಿನಿಸು ಖರೀದಿಸಿ ಮನೆಗೆ ಹೊರಟಿದ್ದ ಮಹಿಳೆಯ (Women) ಕತ್ತು ಕೊಯ್ದು ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಮುಳಗುಂದ ನಾಕಾ ಬಳಿಯ ಎಸ್.ಬಿ ಬೇಕರಿ ಎದುರು ಈ ದುರ್ಘಟನೆ ನಡೆದಿದೆ. ಶಿಂಗಟರಾಯನಕೇರಿ ತಾಂಡಾದ ಶೋಭಾ ಲಮಾಣಿ ಅಲಿಯಾಸ್ ಮೀನಾಜ್ ಬೇಪಾರಿ ಮೃತ ಮಹಿಳೆ. ಹಳೆ ವೈಷಮ್ಯವೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ದುಷ್ಕರ್ಮಿಗಳು ಚಾಕುವಿನಿಂದ ಕತ್ತು ಸೀಳಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಬಡತನ, ನಿರುದ್ಯೋಗ, ಸಂಪತ್ತಿನ ಅಸಮಾನತೆ ಅಪಾಯಕಾರಿಯಾಗುತ್ತಿದೆ – RSS ಬೇಸರ
ಏನಿದು ಘಟನೆ?
2020ರ ಡಿಸೆಂಬರ್ನಲ್ಲಿ ಅನೈತಿಕ ಸಂಬಂಧ ಹೊಂದಿದ್ದನೆಂದು ಆಟೋ ಚಾಲಕ (AutoDriver) ರಮೇಶ್ ಹುಳಕಣ್ಣವರ್ ಎಂಬಾತನ ಕೊಲೆಯಾಗಿತ್ತು. ಮಿನಾಜ್ ಬೇಪಾರಿ ಹಾಗೂ ವಾಸಿಮ್ ಬೇಪಾರಿ ಕೊಲೆ ಮಾಡಿದ್ದರು ಎಂದು ತಿಳಿದುಬಂದಿತ್ತು. ಅದರ ಪ್ರತೀಕಾರವಾಗಿ ಮೃತ ರಮೇಶನ ಸಹೋದರರಾದ ಗಂಗಿಮಡಿ ನಿವಾಸಿ ಚೇತನಕುಮಾರ್ ಹುಳಕಣ್ಣವರ್, ಸ್ನೇಹಿತ ರೋಹನ್ ಕುಮಾರ್ ಸೇರಿ ನಡುರಸ್ತೆಯಲ್ಲಿ ಮಹಿಳೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಇದನ್ನೂ ಓದಿ: PFI ಜೊತೆ SDPIಗೆ ಯಾವುದೇ ಸಂಬಂಧವಿಲ್ಲ – ಚುನಾವಣಾ ಆಯೋಗ ಸ್ಪಷ್ಟನೆ
ಹಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಗದಗ ನ್ಯಾಯಾಲಯದಲ್ಲಿ (Gadag Court) ಕೇಸ್ ಮುಗಿಸಿ ಮಗುವಿನೊಂದಿಗೆ ಮನೆಗೆ ಹೊರಟಿದ್ದಳು. ಮನೆಗೆ ಹೋಗುವಾಗ ಬೇಕರಿಯಲ್ಲಿ ತಿನಿಸು ಖರೀದಿಸಿ ಆಟೋ ಹತ್ತುವ ಮುನ್ನ ಏಕಾಏಕಿ ದಾಳಿ ಮಾಡಿದ್ದಾರೆ. ಘಟನೆಗೆ ಗದಗ ಬೆಟಗೇರಿ ಅವಳಿ ನಗರದ ಜನ ಬೆಚ್ಚಿಬಿಳ್ಳುವಂತಾಗಿದೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮೃತ ಮಹಿಳೆ ಶೋಭಾ ಲಮಾಣಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಮಿನಾಜ್ ಬೇಪಾರಿ ಆಗಿ ಮತಾಂತರ ಆಗಿದ್ದಳು. ಸದ್ಯ ರಾಧಾಕೃಷ್ಣನ್ ನಗರದಲ್ಲಿ ವಾಸಿಮ್ ಬೇಪಾರಿಯೊಂದಿಗೆ ವಾಸವಾಗಿದ್ದರು.
ಸ್ಥಳಕ್ಕೆ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಜಯಂತ ಗೌಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ (Gadag Police Station) ಪ್ರಕರಣ ದಾಖಲಾಗಿದೆ.