ಹುಬ್ಬಳ್ಳಿ: ಯುವತಿಯನ್ನು ಮಾತನಾಡಿಸಿದ್ದಕ್ಕೆ ವಿದ್ಯಾರ್ಥಿಯನ್ನು ಅಪಹರಣ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಾಲ್ವರು ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ (Hubballi) ಹೊರವಲಯದಲ್ಲಿ ನಡೆದಿದೆ.
ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಕೇಶ್ವಾಪುರ ತಳವಾರ ಓಣಿಯ ಮಹಮ್ಮದ್ ಗೌಸ್, ಶಬರಿನಗರದ ಸೋಹೆಲ್ ಬಂಧಿತರು. ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರತೀಕ್ ಮತ್ತು ಸೌರಭ್ ಸದ್ಯ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ನಿಂದ `ಸಿಎಂ ಅಂಕಲ್’ ಅಭಿಯಾನ – ಭುಗಿಲೆದ್ದ ಕೇಸರಿ ವಿವಾದ, ಸರ್ಕಾರಕ್ಕೆ ಹಲವು ಪ್ರಶ್ನೆ
ಗೋಕುಲ ರಸ್ತೆ ಅಕ್ಷಯ ಪಾರ್ಕ್ನ ಖಾಸಗಿ ಕಾಲೇಜ್ನಲ್ಲಿ ವಿದ್ಯಾರ್ಥಿ ಮಂಜುನಾಥ್, ಓರ್ವ ಹುಡುಗಿಯ ಜೊತೆಗೆ ಸಲುಗೆಯಿಂದ ಮಾತನಾಡಿಸಿದ್ದ ವಿಚಾರವಾಗಿ ವಿದ್ಯಾರ್ಥಿಗಳ ನಡುವೆ ಜಗಳವಾಗಿತ್ತು. ಹೀಗಾಗಿ ಮಹಮ್ಮದ್, ಸೋಹೆಲ್, ಪ್ರತೀಕ್ ಮತ್ತು ಸೌರಭ್ ಸೇರಿಕೊಂಡು ಮಂಜುನಾಥ್ ಅನ್ನು ಅಪಹರಿಸಿ ಕುಸುಗಲ್ಲ ರಸ್ತೆಯ ಮಿಡ್ ಮ್ಯಾಕ್ ಹಿಂದುಗಡೆ ಕರೆದೊಯ್ದು ಹಲ್ಲೆ ಮಾಡಿ ಗಾಯಗೊಳಿಸಿದ್ದರು.
ಈ ಸಂಬಂಧ ಕಾಲೇಜಿನ ಪ್ರಾಂಶುಪಾಲರೇ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಪೊಲೀಸರು ಅಪಹರಣಕ್ಕೊಳಗಾದ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಸದ್ಯ ಬಂಧಿತರು ನ್ಯಾಯಾಂಗ ವಶದಲ್ಲಿದ್ದಾರೆ. ಇದನ್ನೂ ಓದಿ: ವೀರಶೈವರು ನಮ್ಮಲ್ಲಿ ದಲಿತರ ರಕ್ತ ಹರಿಯುತ್ತಿದೆ ಎಂದು ಹೇಳಲಿ: ಜ್ಞಾನ ಪ್ರಕಾಶ ಸ್ವಾಮೀಜಿ