ಮುಂಬೈ: ತಂದೆಯ ಜೊತೆ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಟ್ರಕ್ ನಡಿ ಸಿಲುಕಿ 9 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.
ಮೃತ ದುರ್ದೈವಿ ಬಾಲಕನನ್ನು ರಂಜಿತ್ ಕನೋಜಿಯಾ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ತಂದೆ ಮನಿಷ್ ಕನೋಜಿಯಾ ಗಂಭೀರ ಗಾಯಗಳಾಗಿವೆ. 24 ವರ್ಷ ನಾರಾಯಣ ಪಲ್ ಆರೋಪಿ ಟ್ರಕ್ ಡ್ರೈವರ್.
ಮನಿಷ್ ಧೋಬಿ ಘಾಟ್ ನಲ್ಲಿ ಧೋಬಿಯಾಗಿ ಕೆಲಸ ಮಾಡುತ್ತಿದ್ದರು. ರಂಜಿತ್ ತನ್ನ ತಂದೆಯ ಜೊತೆ ಸ್ಕೂಟಿರಿನಲ್ಲಿ ತೆರಳುತ್ತಿದ್ದನು. ಈ ವೇಳೆ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ರಂಜಿತ್ ಟ್ರಕ್ ನಡಿ ಸಿಲುಕಿ ಸಾವನ್ನಪ್ಪಿದ್ದಾನೆ. ಅಲ್ಲದೆ ಮನಿಷ್ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಒದ್ದಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ತಂದೆ-ಮಗ ಇಬ್ಬರನ್ನೂ ಸ್ಥಳೀಯ ಸಿಯೋನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿ ಬಾಲಕ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ತಂದೆ ಮನೀಷ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದ ಸ್ಥಳದಲ್ಲಿದ್ದ ಕೆಲವರು ಟ್ರಕ್ ಚಾಲಕನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಅಂತೋಪ್ ಹಿಲ್ ಪೊಲೀಸರು ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ.