ಉಡುಪಿ: ದೇಶಕ್ಕೂ ಕಾಲಿಟ್ಟು ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಜ್ವರದ ಭೀತಿ ಮಾಸುವ ಮುನ್ನವೇ ಉಡುಪಿ ಜಿಲ್ಲೆಯಲ್ಲಿ ಅಪರೂಪದ ಇಲಿ ಜ್ವರ ಪತ್ತೆಯಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಜಿಲ್ಲೆಯ 85 ಮಂದಿಯಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲಿ ಜ್ವರ ಕಾಣಿಸಿಕೊಂಡಿದ್ದು, ಇದು ಇಲಿಗಳ ಮಲಮೂತ್ರದಿಂದ ಹರಡುವ ಸೋಂಕಾಗಿದೆ. ಮಲೆನಾಡಿನ ತಪ್ಪಲಿನಲ್ಲಿ ಹೆಚ್ಚು ಜನಕ್ಕೆ ಇಲಿಜ್ವರ ಕಾಣಿಸಿಕೊಂಡಿದೆ. ಕುಂದಾಪುರ 40, ಉಡುಪಿ 32, ಕಾರ್ಕಳ 13 ಪ್ರಕರಣ ವರದಿಯಾಗಿದೆ. ಮಳೆಗಾಲದಲ್ಲಿ ಈ ಜ್ವರ ಕಾಣಿಸಿಕೊಳ್ಳಲಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಹರಡುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಏಷ್ಯಾದಲ್ಲಿ ಭಾರತ ಹೊರತು ಪಡಿಸಿ 13 ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ
ಏನಿದು ಇಲಿ ಜ್ವರ?
ವೈಜ್ಞಾನಿಕವಾಗಿ ಲೆಪ್ಟೊಸ್ಪೈರೋಸಿಸ್ ಎಂದು ಕರೆಸಿಕೊಳ್ಳುವ ಈ ಇಲಿ ಜ್ವರ ಬರುವುದು ಲೆಪ್ಟೊಸ್ಪೈರ ಎಂಬ ಬ್ಯಾಕ್ಟೀರಿಯ ರೋಗಾಣುಗಳಿಂದ. ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗಗಳಲ್ಲಿ ಇದೂ ಒಂದು. ಮುಖ್ಯವಾಗಿ ಇಲಿ, ಹೆಗ್ಗಣಗಳಿಂದ ಈ ರೋಗಾಣುಗಳು ಹರಡುವುದರಿಂದ ಇದಕ್ಕೆ ಇಲಿ ಜ್ವರವೆಂದು ಹೆಸರು. ಈ ರೋಗ ಕೇವಲ ಮನುಷ್ಯರನ್ನಷ್ಟೇ ಅಲ್ಲ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು, ವನ್ಯಮೃಗಗಳು ಹೀಗೆ ಬಹುತೇಕ ಪ್ರಾಣಿಗಳನ್ನು ಬಾಧಿಸುತ್ತದೆ. ಇದನ್ನೂ ಓದಿ: ಮಾರ್ಗರೇಟ್ ಆಳ್ವಾ ಅವರ ಫೋನ್ ಟ್ಯಾಪ್ ಆರೋಪದಲ್ಲಿ ಹುರುಳಿಲ್ಲ: ಪ್ರಹ್ಲಾದ್ ಜೋಶಿ ತಿರುಗೇಟು
ರೋಗ ಹೇಗೆ ಹರಡುತ್ತದೆ?
ಹೆಚ್ಚಾಗಿ ಇಲಿ, ಹೆಗ್ಗಣಗಳೇ ರೋಗಾಣುಗಳ ವಾಹಕಗಳು. ಈ ರೋಗ ಇಲಿಗಳನ್ನು ಬಾಧಿಸದಿದ್ದರೂ ಇವು ತಮ್ಮ ಜೀವನ ಪರ್ಯಂತ ಮೂತ್ರದಲ್ಲಿ ರೋಗಾಣುಗಳನ್ನು ವಿಸರ್ಜಿಸುತ್ತಿರುತ್ತವೆ. ಇಂತಹ ಇಲಿಗಳ ಮೂತ್ರದ ಸಂಪರ್ಕಕ್ಕೆ ಬರುವ ಮನುಷ್ಯ, ಪ್ರಾಣಿಗಳಿಗೆ ಸೋಂಕು ತಗಲುತ್ತದೆ. ಹಾಗೆಯೇ ರೋಗಪೀಡಿತ ಪ್ರಾಣಿಗಳ ಮೂತ್ರದ ಮೂಲಕವೂ ಈ ಕಾಯಿಲೆ ಹರಡುತ್ತದೆ. ಆದರೆ ಮನುಷ್ಯನಿಂದ ಮನುಷ್ಯನಿಗೆ ಇದು ಅಂಟುವುದಿಲ್ಲ.
ಮಣ್ಣಿಗೆ ಸೇರಿದ ರೋಗಾಣುಗಳು ಸುಮಾರು ಆರು ಗಂಟೆವರೆಗೆ ಜೀವಂತವಿದ್ದರೆ, ನೀರಿನಲ್ಲಿ ಆರು ತಿಂಗಳವರೆಗೆ ಬದುಕಬಲ್ಲವು. ಹಾಗಾಗಿ ಮಳೆಗಾಲದಲ್ಲಿ, ನೆರೆ ಬಂದಾಗ ಈ ರೋಗದ ಹಾವಳಿ ಜಾಸ್ತಿ. ಪಾದದ ಚರ್ಮದಲ್ಲಿನ ಬಿರುಕುಗಳು, ಒಡೆದ ಹಿಮ್ಮಡಿ, ಗಾಯಗಳ ಮೂಲಕ ರೋಗಾಣುಗಳು ದೇಹ ಪ್ರವೇಶಿಸಬಹುದು. ಇಲಿಮೂತ್ರದಿಂದ ಕಲುಷಿತ ನೀರು, ಆಹಾರದ ಮೂಲಕವೂ ದೇಹ ಸೇರುವ ಕ್ರಿಮಿಗಳು ಬಾಯಿ, ಗಂಟಲು, ಅನ್ನನಾಳದ ಮೂಲಕ ಒಳ ಪ್ರವೇಶಿಸುತ್ತವೆ. ಕಣ್ಣು, ಕಿವಿಯ ಮೂಲಕವೂ ರೋಗಾಣುಗಳು ಶರೀರ ಸೇರಬಹುದು. ಸಾಮಾನ್ಯವಾಗಿ ಸೋಂಕು ತಗುಲಿದ ಎರಡು ದಿನಗಳಿಂದ ಎರಡು ಮೂರು ವಾರಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ.