ಯಾದಗಿರಿ: 150ಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ 5 ಮಂದಿ ದಲಿತ ಮಹಿಳೆಯರು ದೇವಾಲಯವನ್ನು ಪ್ರವೇಶಿಸಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜಿಲ್ಲೆಯ ಸುರಪುರ ತಾಲೂಕಿನ ಅಂಬಲಿಹಾಳ ಗ್ರಾಮದ ಆಂಜನೇಯ ದೇವಾಲಯಕ್ಕೆ ಪೊಲೀಸ್ ಬಿಗಿ ಭದ್ರತೆಯಲ್ಲಿ ದಲಿತ ಮಹಿಳೆಯರು ಪ್ರವೇಶ ಮಾಡಿದ್ದಾರೆ.
ಎಸ್ಪಿ ಡಾ. ಸಿಬಿ ವೇದಮೂರ್ತಿ ಹಾಗೂ ಸಹಾಯಕ ಆಯುಕ್ತ ಶಾಲಂ ಹುಸೇನ್ ನೇತೃತ್ವದಲ್ಲಿ ಮಹಿಳೆಯರು ಪೊಲೀಸ್ ವಾಹನದಲ್ಲಿ ದೇವಾಯಕ್ಕೆ ಆಗಮಿಸಿದರು. ಬಳಿಕ ಆಂಜನೇಯ ದೇಗುಲ ಪ್ರವೇಶಿಸಿದ ಮಹಿಳೆಯರು ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿ ಇಂದಿಗೆ 7 ತಿಂಗಳು : ಸಮಾಧಿ ಮುಂದೆ ಜನಸಾಗರ
ಮೂಲತಃ ಅಂಬಲಿಹಾಳ ಗ್ರಾಮದ ದಲಿತ ಮಹಿಳೆಯರು ಸುಮಾರು ವರ್ಷಗಳಿಂದ ಮಾವಿನಹಾಳ ಗ್ರಾಮದಲ್ಲಿ ವಾಸವಿದ್ದರು. ಆಂಜನೇಯ ಭಕ್ತರೂ ಆಗಿದ್ದ ಮಹಿಳೆಯರು, ಇತ್ತೀಚೆಗೆ ಆಂಜನೇಯ ಗುಡಿಗೆ ಪ್ರವೇಶ ಮಾಡಿ ಜಾತ್ರೆ ಮಾಡುತ್ತೇವೆ ಎಂದಿದ್ದರು. ಇದಕ್ಕೆ ಅಂಬಲಿಹಾಳ ಗ್ರಾಮದ ಮೇಲ್ವರ್ಗದ ಜನರು ವಿರೋಧ ವ್ಯಕ್ತಪಡಿಸಿದ್ದರು.
ಶನಿವಾರ ಅಮಾವಾಸ್ಯೆ ಹಾಗೂ ವಿವಿಧ ಕಾರ್ಯಕ್ರಮದ ವೇಳೆ ದೇಗುಲದಲ್ಲಿ ದಲಿತ ಮಹಿಳೆಯರು ದರ್ಶನ ಪಡೆಯಲು ಮುಂದಾಗಿದ್ದರು. ಆದರೆ ಇದಕ್ಕೆ ಮೇಲ್ವರ್ಗದ ಜನರು ವಿರೋಧ ಮಾಡಿದ ಹಿನ್ನೆಲೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಭಾನುವಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ದೇಗುಲ ಪ್ರವೇಶಿಸಿದ್ದಾರೆ. ಇದನ್ನೂ ಓದಿ: ಗ್ರಾಮದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ ಆರೋಪ
ಖಾಕಿ ಕಟ್ಟೆಚ್ಚೆರ:
ದಲಿತ ಮಹಿಳೆಯರು ದೇಗುಲ ಪ್ರವೇಶ ಮಾಡಿದ ಹಿನ್ನೆಲೆ, ಅಂಬಲಿಹಾಳ ಹಾಗೂ ಹೂವಿನಹಳ್ಳಿ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ್ದ ಕೆಂಡದಂತಾಗಿದೆ. ಮೇಲ್ವರ್ಗದ ಜನರು ಗಲಾಟೆ ಮಾಡುವ ಸಾಧ್ಯತೆ ಇದ್ದು, ಅಂಬಲಿಹಾಳ ಹಾಗೂ ಹೂವಿನಹಳ್ಳಿ ಗ್ರಾಮಕ್ಕೆ ಪೊಲೀಸ್ ಭದ್ರತೆ ಇರಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ 2 ಕೆಎಸ್ಆರ್ಪಿಡಿಆರ್ ತುಕಡಿ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಲಾಗಿದೆ.