ನವದೆಹಲಿ: ಮುಂಗಾರು ಅಧಿವೇಶನದ ವೇಳೆ ಬೆಲೆ ಏರಿಕೆ ಖಂಡಿಸಿ ಸದನದೊಳಗೇ ಭಿತ್ತಿಪತ್ರ (ಪ್ಲೇ-ಕಾರ್ಡ್) ಹಿಡಿದು ಪ್ರತಿಭಟನೆ ನಡೆಸಿದ ನಾಲ್ವರು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ.
ಸದನದಲ್ಲೇ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಟಿಎನ್ ಪ್ರತಾಪನ್ ಅವರನ್ನ ಅಮಾನತು ಮಾಡಲಾಗಿದ್ದು, ಆಗಸ್ಟ್ 12ರ ವರೆಗೂ ನಡೆಯಲಿರುವ ಮುಂಗಾರು ಅಧಿವೇಶನದಿಂದ ಹೊರಗಿಡುವಂತೆ ಸಭಾಧ್ಯಕ್ಷ ಓಂ ಬಿರ್ಲಾ ಸೂಚಿಸಿದ್ದಾರೆ. ಇದನ್ನೂ ಓದಿ: ಸಂಸತ್ ಅಧಿವೇಶನದಲ್ಲಿ ಧರಣಿ ನಡೆಸುವಂತಿಲ್ಲ: ಆದೇಶ ಪ್ರಕಟ
ಇದಕ್ಕೂ ಮುನ್ನ ಸಭಾಧ್ಯಕ್ಷರು `ನಾನು ಚರ್ಚೆಗೆ ಸಿದ್ಧನಿದ್ದೇನೆ. ಇಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆಗಳು ಆಗಬೇಕು. ನೀವು ಪ್ರತಿಭಟನೆ ಮಾಡುವುದಿದ್ದರೆ ಸದನದಿಂದ ಹೊರಗೆ ಮಾಡಿ. ಆದರೆ ನನ್ನ ಹೃದಯವಂತಿಕೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಸಂಸತ್ ಕಲಾಪದಲ್ಲಿ ಅಸಂಸದೀಯ ಪದಗಳಿಗೆ ಕತ್ತರಿ – ಈ ಪದಗಳು ಬ್ಯಾನ್
ಮಧ್ಯಾಹ್ನದ 3 ಗಂಟೆಯ ಬಳಿಕ ಚರ್ಚೆ ಮುಂದುವರಿಸುವುದಾಗಿ ಹೇಳಿದ್ದರು. ಆದರೆ ಶೂನ್ಯ ಸಮಯ ಆರಂಭವಾಗುವ 20 ನಿಮಿಷದ ಮುನ್ನವೇ ಚರ್ಚೆ ಅರಂಭವಾಯಿತು. ಈ ವೇಳೆ ಕಾಂಗ್ರೆಸ್ ಸಂಸದರು ಪ್ಲೇ ಕಾರ್ಡ್ ಹಿಡಿದು ಪ್ರವೇಶಿಸಿದ್ದರಿಂದ ಅವರನ್ನು ಇಡೀ ಅಧಿವೇಶನದಿಂದ ಅಮಾನತು ಮಾಡಿ, ಕಲಾಪವನ್ನು ನಾಳೆಗೆ ಮುಂದೂಡಿದ್ದಾರೆ.
ಸ್ಪೀಕರ್ ಕ್ರಮದ ನಂತರವೂ ನಾಲ್ವರು ಸಂಸದರು ಸಂಸತ್ ಮೈದಾನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ತೆರಳಿ ಘೋಷಣೆಗಳನ್ನು ಕೂಗಿದ್ದಾರೆ. ಕಾಂಗ್ರೆಸ್ ಸಂಸದರು ಪ್ರಮುಖ ಸಮಸ್ಯೆಗಳನ್ನು ಎತ್ತಲು ಪ್ರತ್ನಿಸುತ್ತಿದ್ದಾರೆ. ಆದರೆ ಕೆಲವರನ್ನು ಅಮಾನತು ಮಾಡುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಸದರನ್ನು ಬೆದರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.