ಮಂಗಳೂರು: ಜಿಲ್ಲೆಯ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿ ಇರುವ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್ಮೆಂಟ್ ಎನ್ನುವ ಕಂಪನಿಯಿಂದ ಮೋಸಕ್ಕೊಳಗಾದ 35 ಮಂದಿ ಮಂಗಳೂರಿಗರು ಕಳೆದ 6 ತಿಂಗಳಿನಿಂದ ಕುವೈಟ್ನಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.
ಕುವೈಟ್ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್ಮೆಂಟ್ ಕಂಪನಿಯ ಪ್ರಸಾದ್ ಶೆಟ್ಟಿ ಎಂಬವರು ಪ್ರತಿಯೊಬ್ಬರಿಂದ 65 ಸಾವಿರ ರೂ. ವಸೂಲಿ ಮಾಡಿದ್ದರು. ಇದನ್ನು ನಂಬಿ ಕುವೈಟ್ಗೆ ತೆರಳಿದ್ದ ಜನರು ಮಾತ್ರ ಸರಿಯಾದ ಕೆಲಸ ದೊರೆಯದೆ, ಕಳೆದ 6 ತಿಂಗಳಿಂದ ಪರದಾಡುತ್ತಿದ್ದಾರೆ.
ಪ್ರಸ್ತುತ ಊಟಕ್ಕೂ ಗತಿಯಿಲ್ಲದೆ ತೀರಾ ಸಂಕಷ್ಟ ಎದುರಿಸುತ್ತಿದ್ದಾರೆ. ಇಂಡಿಯನ್ ಎಂಬೆಸಿಯನ್ನು ಸಂಪರ್ಕಿಸಿದ್ದರೂ ಯಾವುದೇ ಪ್ರಯೋಜನವಾಗದೆ ಕೊನೆಯದಾಗಿ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಅವರನ್ನು ವಿಡಿಯೋ ರೆಕಾರ್ಡ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.
ಸಂತ್ರಸ್ತರ ವಿಡಿಯೋ ವೈರಲ್ಗೊಳ್ಳುವ ಮೂಲಕ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ತಲುಪಿದ್ದು, ಕೂಡಲೇ ಸ್ಪಂದಿಸಿದ ಶಾಸಕರು ಕುವೈಟ್ನಲ್ಲಿರುವ ತನ್ನ ಗೆಳೆಯರನ್ನು ಸಂಪರ್ಕಿಸಿ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಅಲ್ಲದೆ ಕೇಂದ್ರ ಸಚಿವಾಲಯದ ಮೂಲಕ ಇಂಡಿಯನ್ ಎಂಬೆಸಿಯನ್ನು ಸಂಪರ್ಕಿಸಿ ಸಂತ್ರಸ್ತರನ್ನು ಹಿಂದಕ್ಕೆ ಕರೆಸಿಕೊಳ್ಳುವ ವ್ಯವಸ್ಥೆಯ ಬಗ್ಗೆಯೂ ಕ್ರಮ ಕೈಗೊಂಡಿದ್ದಾರೆ. ಇಂದು ಇಂಡಿಯನ್ ಎಂಬೆಸಿ ಸಂತ್ರಸ್ತರನ್ನು ಭೇಟಿಯಾಗಲಿದೆ.