ನವದೆಹಲಿ: ಕೇವಲ 3,000 ರೂ. ಹಣಕ್ಕಾಗಿ ಇಬ್ಬರ ಮೇಲೆ ದಾಳಿಕೋರರು ಹಲ್ಲೆ ನಡೆಸಿ ಒಬ್ಬನನ್ನು ಹತ್ಯೆ ಮಾಡಿರುವ ಘಟನೆ ದೆಹಲಿಯ ಸಂಗಮ್ ವಿಹಾರ ಬಳಿ ನಡೆದಿದೆ. ದಾಳಿಕೋರರು ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಲ್ಲೆಗೊಳಗಾದವರು ಪಂಕಜ್, ಜತಿನ್ ಎಂದು ಗುರುತಿಸಲಾಗಿದೆ. ಇಬ್ಬರೂ ಕಂಪೆನಿಯೊಂದರಲ್ಲಿ ಉದ್ಯೋಗಿಗಳಾಗಿದ್ದರು. ಇದನ್ನೂ ಓದಿ: ಕೆಎಫ್ಸಿ ಚಿಕನ್ನಲ್ಲಿ ಮಹಿಳೆಗೆ ಸಿಕ್ತು ಕೋಳಿ ತಲೆ
ಇಬ್ಬರೂ ಸ್ನೇಹಿತರೊಬ್ಬರ ಬರ್ತ್ಡೇ ಪಾರ್ಟಿ ಮುಗಿಸಿಕೊಂಡು ರಾತ್ರಿ ವೇಳೆ ಬರುತ್ತಿದ್ದರು. ಈ ವೇಳೆ ಗುಂಪೊಂದು ಇವರ ಮೇಲೆ ದಾಳಿ ನಡೆಸಿದೆ. ಅವರ ಬಳಿಯಿರುವ ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಕೇಳಿದ್ದಾರೆ. ವಸ್ತುಗಳನ್ನು ಕೊಡಲು ನಿರಾಕರಿಸಿದಕ್ಕೆ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಚರಂಡಿಗೆ ಎಸೆದು ಪರಾರಿಯಾಗಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಇಬ್ಬರಲ್ಲಿ ಜತಿನ್ ಸಾವಿಗೀಡಾಗಿದ್ದಾನೆ.
ಸುಮಾರು 7 ಮಂದಿ ಗುಂಪು ಯುವಕರ ಮೇಲೆ ಹಲ್ಲೆ ನಡೆಸಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭೀಕರ ಹಲ್ಲೆ ನಡೆಸಿದ ನಂತರ ಯುವಕನ ಜೇಬಿನಲ್ಲಿದ್ದ 3,000 ರೂ. ಹಣವನ್ನು ಕಸಿದುಕೊಂಡು ಗುಂಪು ಪರಾರಿಯಾಗಿದೆ. ಇದನ್ನೂ ಓದಿ: ವಿಗ್ ಒಳಗಡೆ ಡಿವೈಸ್ – ಪೊಲೀಸ್ ಪರೀಕ್ಷೆಯ ವೇಳೇ ಸಿಕ್ಕಿ ಬಿದ್ದ ಭೂಪ
ಹಲ್ಲೆಯಿಂದ ಗಾಯಗೊಂಡು ಬಳಲುತ್ತಿದ್ದ ಜತಿನ್ ಮತ್ತು ಪಂಕಜ್ನನ್ನು ಜತಿನ್ ಸಹೋದರ ಮನೆಗೆ ಕರೆದೊಯ್ದಿದ್ದಾನೆ. ನಂತರ ಇಬ್ಬರನ್ನೂ ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾನೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾನೆ. ಇದಾದ ಬಳಿಕ ಭೀಕರ ಹಲ್ಲೆಗೊಳಗಾಗಿದ್ದ ಜತಿನ್ ಸಾವಿಗೀಡಾಗಿದ್ದಾನೆ.