ಮುಂಬೈ: 50 ರೂಪಾಯಿ ಕದ್ದ ಮಗನ ತಂದೆ ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ವಘೋಬಾ ನಗರದ ಸ್ಲಂ ಕಾಲೋನಿಯಲ್ಲಿ ನಡೆದಿದೆ.
ಓಂಪ್ರಕಾಶ್ ಪ್ರಜಾಪತಿ (41) ಮನ ಮೇಲೆ ಹಲ್ಲೆ ಮಾಡಿದ ವ್ಯಕ್ತಿ. ಈತ ತನ್ನ 10 ವರ್ಷದ ಮಗ 50 ರೂ. ಕದ್ದ ಎನ್ನುವ ಸಿಟ್ಟಿಗೆ ಥಳಿಸಿದ್ದಾನೆ. ಬಾಲಕ ನಿತ್ರಾಣವಾಗಿ ನೆಲದ ಮೇಲೆ ಬಿದ್ದಿದ್ದನು. ಸ್ವಂತ ಮಗನನ್ನೇ ಥಳಿಸಿ ಕೊಂದಿದ್ದು ಆತನನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡವೊಂದು ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆ ವೇಳೆಗಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಮನೆಯಿಂದ 50 ರೂಪಾಯಿ ಕದ್ದ ಎಂಬ ಕಾರಣದಿಂದ ತಂದೆಯೇ ಹೊಡೆದಿರುವುದಾಗಿ ಆ ಸಮಯದಲ್ಲಿ ಅಲ್ಲಿದ್ದ ಬಾಲಕನ ಅಕ್ಕ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಪೊಲೀಸರು ವಿವರಿಸಿದರು.
ಪ್ರಜಾಪತಿ ವಿರುದ್ಧ ಕೊಲೆಯ ಪ್ರಕರಣ ದಾಖಲಿಸಲಾಗಿದೆ. ಮೃತ ಬಾಲಕನ ತಾಯಿಯ ವಿಚಾರಣೆ ನಡೆಯುತ್ತಿದೆ ಎಂದು ಕಲ್ವಾ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದರು. 50 ರೂಪಾಯಿ ಮಗ ಕದ್ದಿದ್ದಾನೆ ಎನ್ನುವ ಸಿಟ್ಟು ಮಗನ ಪ್ರಾಣವನ್ನೇ ತೆಗೆದು ಬಿಟ್ಟಿದೆ. ಇದನ್ನೂ ಓದಿ: 3 ಕೋಟಿ ವೆಚ್ಚದ ರಸ್ತೆ ನಿರ್ಮಾಣ, 1 ಕೋಟಿಯ ಯುಜಿಡಿ ಕಾಮಗಾರಿಗೆ ಶೀಘ್ರ ಚಾಲನೆ: ಜಗದೀಶ್ ಶೆಟ್ಟರ್