ನವದೆಹಲಿ: ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಶಶಿಕಲಾ ಜೊಲ್ಲೆ ದಿಢೀರ್ ದೆಹಲಿಗೆ ಆಗಮಿಸಿದ್ದು ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭೇಟಿಗೆ ಪ್ರಯತ್ನಿಸುತ್ತಿದ್ದು, ಸಚಿವ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶತ ಪ್ರಯತ್ನ ಮಾಡುತ್ತಿದ್ದಾರೆ.
ಈ ಸಂಬಂಧ ದೆಹಲಿಯಲ್ಲಿ ಮಾತನಾಡಿದ ಅವರು, ಸಂಪುಟದಿಂದ ಕೈ ಬಿಡುವ ವಿಚಾರವನ್ನು ತಿರಸ್ಕರಿಸಿದರು. ಸಂಪುಟದಿಂದ ಕೈ ಬಿಡುವ ಬಗ್ಗೆ ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆ ರೀತಿಯ ಯಾವುದೇ ಮಾಹಿತಿ ನನಗೆ ಇಲ್ಲ. ಕಾಗೆ ಕೂರುವ ವೇಳೆ ರೆಂಬೆ ಮುರಿದಂತದಂತಾಗಿದೆ. ನಮ್ಮ ಇಲಾಖೆ ಕೆಲಸಗಳ ಹಿನ್ನೆಲೆ ದೆಹಲಿಗೆ ಬಂದಿದ್ದೇನೆ. ಇದು ಸಚಿವ ಸ್ಥಾನ ಉಳಿಸಿಕೊಳ್ಳಲು ದೆಹಲಿ ಭೇಟಿ ಎನ್ನುವಂತಾಗಿದೆ. ಆ ರೀತಿಯ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದರು.
ಕರ್ನಾಟಕ ಭವನದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಸೌರ್ಹದಯುತವಾಗಿ ಭೇಟಿಯಾಗಿದ್ದೆ. ಹೈಕಮಾಂಡ್ ನಾಯಕರ ಭೇಟಿಗೆ ಅವಕಾಶ ಸಿಕ್ಕರೆ ಭೇಟಿ ಮಾಡುವೆ. ಈ ವೇಳೆ ಸರ್ಕಾರಕ್ಕೆ ಒಂದು ವರ್ಷ ಪೂರ್ಣ ಹಿನ್ನೆಲೆ ಧನ್ಯವಾದ ಹೇಳಲಿದ್ದೇನೆ. ಸಂಪುಟ ವಿಸ್ತರಣೆ, ಪುನಾರಚನೆ ಎರಡಲ್ಲಿ ಒಂದು ಆಗಲಿದೆ. ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರು ನಾನು ಅದಕ್ಕೆ ಬದ್ಧವಾಗಿದ್ದೇನೆ ಎಂದು ತಿಳಿಸಿದರು.