ಶ್ರೀನಗರ: ಇಂದು ಬೆಳಗಿನಜಾವ ಜಮ್ಮು ಕಾಶ್ಮೀರದ ಶೋಪಿಯನ್ನಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಭಾರತೀಯ ಸೇನೆಯ ಯೋಧರು ಮೂವರು ಉಗ್ರರನ್ನು ಸೆದೆ ಬಡಿದಿದ್ದಾರೆ.
ಬೆಳಗಿನಜಾವ 5 ಗಂಟೆಗೆ ಶೋಪಿಯಾನ್ನ ಕುರ್ಕ್ವಾಂಗಮ್ ಪ್ರದೇಶದಲ್ಲಿ 44 ರಾಷ್ಟ್ರೀಯ ರೈಫಲ್ಸ್ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮೂವರು ಉಗ್ರರರು ಹತರಾಗಿದ್ದಾರೆ.
ರಾಷ್ಟ್ರೀಯ ರೈಫಲ್ಸ್ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಝೈನಾಪುರದ ವಿಶೇಷ ಕಾರ್ಯಾಚರಣೆ ಪಡೆ(ಎಸ್ಒಜಿ)ಯ ಹಾಗೂ ಸಿಆರ್ ಪಿಎಫ್ನ 178ನೇ ಬೆಟಾಲಿಯನ್ ಯೋಧರು ಸೇರಿಕೊಂಡಿದ್ದಾರೆ. ಬೆಳಗ್ಗೆ 6.30ರ ಹೊತ್ತಿಗೆ ಜಂಟಿ ಕಾರ್ಯಾಚರಣೆ ಪೂರ್ಣಗೊಂಡಿದೆ. ಹತ್ಯೆಯಾದ ಮೂವರು ಉಗ್ರರ ಗುರುತನ್ನು ಪತ್ತೆ ಹಚ್ಚಬೇಕಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ ನಡೆದ ಸ್ಥಳದಿಂದ ಒಂದು ಐಎನ್ಎಸ್ಎಎಸ್ ಹಾಗೂ ಎರಡು ಎಕೆ-47 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪತ್ತೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರವಷ್ಟೇ ಜಮ್ಮು ಕಾಶ್ಮೀರದ ಕುಲ್ಗಮ್ ಜಿಲ್ಲೆಯಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ಹತ್ಯೆ ಮಾಡಲಾಗಿತ್ತು.