ನವದೆಹಲಿ: ಪಿಎಂ ಕೇರ್ಸ್ ಫಂಡ್ ಕುರಿತು ಹಲವು ವಾದ ವಿವಾದಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿ ಪಿಎಂ ಕೇರ್ಸ್ ಫಂಡ್ಗೆ 2.25 ಲಕ್ಷ ರೂ. ದಾನ ನೀಡಿದ್ದಾರೆ. ಅಲ್ಲದೆ ಈವರೆಗೆ ಪ್ರಧಾನಿ ಮೋದಿ ದೇಶಕ್ಕಾಗಿ 103 ಕೋಟಿ ರೂ.ಗಳನ್ನು ದಾನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬುಧವಾರವಷ್ಟೇ ಪಿಎಂ ಕೇರ್ಸ್ ಫಂಡ್ನ ಆಡಿಟ್ ರಿಪೋರ್ಟ್ ನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಪ್ರಧಾನಿ ಮೋದಿ 2.25 ಲಕ್ಷ ರೂ.ಗಳನ್ನು ದಾನ ನೀಡಿರುವುದು ಬೆಳಕಿಗೆ ಬಂದಿದೆ.
ಕೊರೊನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಮಾರ್ಚ್ 27ರಂದು ಪಿಎಂ ಕೇರ್ಸ್ ಫಂಡ್ ರಚಿಸಿತ್ತು. ಈ ಮೂಲಕ ದಾನಿಗಳಿಂದ ಸಹಾಯ ಕೋರಿತ್ತು. ಇದಕ್ಕೆ ದೇಶಾದ್ಯಂತ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿ ಹಲವು ಗಣ್ಯರು, ನಟ, ನಟಿಯರು ಸೇರಿ ವಿವಿಧ ಕ್ಷೇತ್ರದ ಶ್ರೀಮಂತರು ಸಹಾಯ ಮಾಡಿದ್ದರು. ಈ ಮೂಲಕ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದರು.
ಪ್ರಧಾನಿ ಮೋದಿಯವರ 2.25 ಲಕ್ಷ ರೂ. ಹೊರತುಪಡಿಸಿ, ಪಿಎಂ ಕೇರ್ಸ್ ರಚಿಸಿದ ಐದೇ ದಿನಗಳಲ್ಲಿ ಬರೋಬ್ಬರಿ 3,076 ಕೋಟಿ ರೂ. ಸಂಗ್ರಹವಾಗಿತ್ತು. ಇದಕ್ಕಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್, ಸ್ಮೃತಿ ಇರಾನಿ ಸೇರಿ ಬಿಜೆಪಿಯ ಬಹುತೇಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ಮೊದಲಲ್ಲ ಈ ಹಿಂದೆ ಸಹ ಸಾರ್ವಜನಿಕರ ಹಿತಾಸಕ್ತಿಗಾಗಿ ಪ್ರಧಾನಿ ಮೋದಿ ಹಲವು ಬಾರಿ ದಾನ ನೀಡಿದ್ದಾರೆ. ಈ ಮೂಲಕ ಇತರ ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆ.
ಹೆಣ್ಣು ಮಕ್ಕಳ ಶಿಕ್ಷಣದ ಕಾರ್ಯಕ್ರಮಗಳಿಂದ ಹಿಡಿದು, ಸ್ವಚ್ಛ ಗಂಗಾ(ಕ್ಲೀನ್ ಗಂಗಾ) ಯೋಜನೆಯವರೆಗೆ ಕೊಡುಗೆ ನೀಡಿದ್ದಾರೆ. ಅಲ್ಲದೆ ದೇಶದ ದೀನ ದಲಿತರ ಉದ್ಧಾರಕ್ಕೂ ಹಣ ನೀಡಿದ್ದಾರೆ. ಹೀಗೆ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ದಾನ ನೀಡಿದ್ದು, ಇದರ ಒಟ್ಟು ಮೊತ್ತ 103 ಕೋಟಿ ರೂ.ಗೂ ಅಧಿಕವಾಗಿದೆ. 2019ರಲ್ಲಿ ಕುಂಭ ಮೇಳದ ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿ ತಮ್ಮ ವೈಯಕ್ತಿಕ ಉಳಿತಾಯದ ನಿಧಿಯಿಂದ 21 ಲಕ್ಷ ರೂ.ಗಳನ್ನು ದಾನವಾಗಿ ನೀಡಿದ್ದಾರೆ.
ದಕ್ಷಿಣ ಕೋರಿಯಾ ನೀಡಿದ ಸಿಯೋಲ್ ಶಾಂತಿ ಪ್ರಶಸ್ತಿಯ ಒಟ್ಟು 1.3 ಕೋಟಿ ರೂ.ಗಳ ಮೊತ್ತವನ್ನು ನಮಾಮಿ ಗಂಗಾ ಯೋಜನೆಗೆ ನೀಡಿದ್ದರು. ಈ ಮೂಲಕ ನದಿಯನ್ನು ಸ್ವಚ್ಛಗೊಳಿಸಲು ತಮ್ಮದೆಯಾದ ಕೊಡುಗೆ ನೀಡಿದ್ದರು.
ಪ್ರಧಾನಿ ಮೋದಿ ತಮಗೆ ನೀಡಿದ ಮೊಮೊಂಟೋಗಳನ್ನು ಹರಾಜು ಹಾಕಿದ್ದು, ಇದರಿಂದ 3.40 ಕೋಟಿ ರೂ. ಸಂಗ್ರಹವಾಗಿತ್ತು. ಇದರ ಸಂಪೂರ್ಣ ಮೊತ್ತವನ್ನು ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್ಗೆ ದಾನವಾಗಿ ನೀಡಿದ್ದಾರೆ. ಅಲ್ಲದೆ ಹೆಚ್ಚುವರಿಯಾಗಿ 2015ರ ವರೆಗೆ ತಮಗೆ ಬಂದ ಉಡುಗೊರೆ ಹಾಗೂ ಮೊಮೆಂಟೋಗಳನ್ನು ಹಾರಾಜು ಮಾಡಿದ್ದು, ಇದರಿಂದ ಸಹ 8.35 ಕೋಟಿ ರೂ.ಸಂಗ್ರಹವಾಗಿದೆ. ಇದರ ಸಂಪೂರ್ಣ ಮೊತ್ತವನ್ನು ಸಹ ನಮಾಮಿ ಗಂಗಾ ಯೋಜನೆಗೆ ನೀಡಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರಾವಧಿ ಪೂರ್ಣಗೊಂಡ ಬಳಿಕ 21 ಲಕ್ಷ ರೂ.ಗಳ ತಮ್ಮ ವೈಯಕ್ತಿಕ ಉಳಿತಾಯದ ಹಣವನ್ನು ಗುಜರಾತ್ನ ಸರ್ಕಾರಿ ಸಿಬ್ಬಂದಿಯ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನೀಡಿದ್ದರು. ಮುಖ್ಯಮಂತ್ರಿಯಾಗಿದ್ದಾಗ ತಮಗೆ ನೀಡಿದ ಎಲ್ಲ ಉಡುಗೊರೆಗಳನ್ನು ಹರಾಜು ಮಾಡಿದಾಗ ಬಂದ ಒಟ್ಟು 89.96 ಕೋಟಿ ರೂ.ಗಳನ್ನು ಕನ್ಯಾ ಕೇಲವಾನಿ ನಿಧಿಗೆ ದೇಣಿಗೆಯಾಗಿ ನೀಡುವ ಮೂಲಕ ಇತರ ನಾಯಕರಿಗೆ ಮಾದರಿಯಾಗಿದ್ದಾರೆ.