ಹಾಸನ: ಇಷ್ಟು ದೊಡ್ಡ ಕಾಲೇಜು ಕಟ್ಟುವ ಮೊದಲು ರಸ್ತೆ ನಿರ್ಮಾಣ ಮಾಡಬೇಕಿತ್ತು ಇದನ್ನು ಹೊರತುಪಡಿಸಿ ಅವರು ನಾವು ಹೆಲಿಕಾಪ್ಟರ್ ನಲ್ಲಿ ಬರುವುದಲ್ಲವೇ ಎಂಬ ರೀತಿ ಪ್ಲಾನ್ ಮಾಡಿದ್ದಾರೆ. ಹಾಗಾಗಿ ಇಂತಹದೊಂದು ಸಮಸ್ಯೆಯಾಗಿದೆ ಎಂದು ಶಾಸಕ ಪ್ರೀತಂ ಜೆ. ಗೌಡ ಮತ್ತೊಮ್ಮೆ ರೇವಣ್ಣ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.
ಹಾಸನದ ಪಶುಸಂಗೋಪನಾ ಮತ್ತು ಸಂಶೋಧನಾ ಸಂಸ್ಥೆಗೆ ಇಂದು ಸಚಿವ ಪ್ರಭು ಚೌಹ್ಹಾಣ್ ಜೊತೆಯಲ್ಲಿ ಪ್ರೀತಂ ಗೌಡ ಭೇಟಿ ನೀಡಿದ ವೇಳೆ ಕಾಲೇಜು ಆಡಳಿತ ಮಂಡಳಿಯವರು, ರಿಂಗ್ ರಸ್ತೆಯಿಂದ ಕಾಲೇಜಿಗೆ ಬರಲು ಸರಿಯಾದ ರಸ್ತೆಯಿಲ್ಲ. ದಯಮಾಡಿ ಕಾಲೇಜಿಗೊಂದು ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಮನವಿ ಮಾಡಿಕೊಂಡರು.
ಈ ಹಿಂದೆ ರಸ್ತೆಗಾಗಿ 5-10 ಕೋಟಿ ಖರ್ಚಾಗುತ್ತಿತ್ತು. ಆದರೆ ಈಗ 20-30ಕೋಟಿ ಖರ್ಚಾಗುತ್ತೆ ಎಂದು ಸಚಿವರಿಗೆ ಮನವಿ ಮಾಡಿದಾಗ ಸ್ಥಳೀಯ ಶಾಸಕರ ಗಮನಕ್ಕೆ ತಂದು ಕೂಡಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ಸಚಿವರು ತಿಳಿಸಿದರು. ಈ ವೇಳೆ ಮಾತಿನ ಮಧ್ಯೆ ಪ್ರವೇಶಿಸಿ ಮಾತನಾಡಿದ ಪ್ರೀತಂ ಗೌಡ, ನಾನು ಇಷ್ಟು ದೊಡ್ಡ ಕಾಲೇಜು ನಿರ್ಮಾಣ ಮಾಡುತ್ತಿರುವಾಗ ಮೊದಲು ರಸ್ತೆ ಮಾಡಬೇಕು. ನಂತರ ಕಾಲೇಜು ಮಾಡಬೇಕು ಎಂಬ ವಿಚಾರ ಈ ಹಿಂದೆ ಕಾಮಗಾರಿ ಮಾಡಿದವರಿಗೆ ಗೊತ್ತಿರಬೇಕಿತ್ತು. ಆದರೆ ಅವರು ನಾವು ಹೆಲಿಕಾಪ್ಟರ್ ನಲ್ಲಿ ಬರುವುದಲ್ಲವೇ ಎಂಬ ಯೋಚನೆಯಿಂದ ಪ್ಲಾನ್ ಮಾಡಿದ್ದಾರೆ. ಹಾಗಾಗಿ ಕಾಲೇಜಿಗೆ ರಸ್ತೆ ಸಮಸ್ಯೆಯಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ಪರೋಕ್ಷವಾಗಿ ಮಾತಿನ ಚಾಟಿ ಬೀಸಿದರು.
2006-07ರಲ್ಲಿದ್ದ 20-20 ಸರ್ಕಾರದಲ್ಲಿ ಹಾಸನಕ್ಕೆ ಬೃಹತ್ ಕಟ್ಟಡವನ್ನು ಹೊಂದಿರು ಪಶುವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಆ ಬಳಿಕ ಅಲ್ಲಿಂದ ಇಲ್ಲಿಯ ತನಕ ರಸ್ತೆಯ ವಿಚಾರವಾಗಿ ಸ್ಥಳೀಯರು ನ್ಯಾಯಾಲಯದ ಮೆಟ್ಟಿಲೇರಿದ್ದು, ಕಾಲೇಜಿನ ರಸ್ತೆ ಸಂಪರ್ಕ ಇನ್ನು ಕಗ್ಗಂಟಾಗಿಯೇ ಉಳಿದಿದೆ.