– ಕಲ್ಲು ತೂರಿ ಹಲ್ಲೆ, ಆಸ್ತಿ ಹಾನಿ ಮಾಡುವವರ ವಿರುದ್ಧ ಕಠಿಣ ಕ್ರಮ
ಭೋಪಾಲ್: ಕಲ್ಲು ತೂರಾಟಕ್ಕೆ ರಾಜ್ಯದಲ್ಲಿ ಅನುಮತಿ ಇಲ್ಲ. ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡುವವರ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸುವ ಕಟ್ಟುನಿಟ್ಟಿನ ಕಾನೂನು ರೂಪಿಸಲಾಗುವುದು ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ತಿಳಿಸಿದ್ದಾರೆ.
ಇಂದೋರ್ ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಲ್ಲು ತೂರಾಟ ಘಟನೆಗಳ ಕುರಿತು ಬಿಗಿ ನಿಯಂತ್ರಣ ಸಾಧಿಸಲು ಜೀವಾವಧಿ ಶಿಕ್ಷೆ ವಿಧಿಸುವ ಕಠಿಣ ಕಾನೂನು ರೂಪಿಸಲಾಗುವುದು. ಕಲ್ಲು ತೂರಾಟ ನಡೆಸುವವರ ವಿರುದ್ಧ ಬಲವಾದ ಕಾನೂನು ಜಾರಿಗೊಳಿಸುತ್ತಿದ್ದೇವೆ. ಉದ್ದೇಶಿತ ಕಾನೂನಿನಡಿ ಜೀವಾವಧಿ ಶಿಕ್ಷೆ ವಿಧಿಸಲಾಗುವುದು. ಇವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುವುದಿಲ್ಲ. ಎಲ್ಲದಕ್ಕೂ ಕಲ್ಲು ತೂರಾಟ ನಡೆಸುತ್ತಾರೆ. ಈ ಮೂಲಕ ಜನರಲ್ಲಿ ಭಯ ಹುಟ್ಟಿಸುತ್ತಾರೆ ಎಂದು ಸಿಎಂ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಹಿಂದೂ ಸೇರಿದಂತೆ ಹಲವು ಸಂಘಟನೆಗಳು ಉಜ್ಜಯಿನಿ, ಇಂದೋರ್ ಹಾಗೂ ಮಾಂಡ್ಸೌರ್ ನಲ್ಲಿ ರ್ಯಾಲಿ ನಡೆಸಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಈ ಘಟನೆ ನಡೆದ ಕೆಲವೇ ದಿನಗಳ ಬಳಿಕ ಸಿಎಂ ಈ ಹೇಳಿಕೆ ನೀಡಿದ್ದಾರೆ. ಈ ಹಿಂಸಾಚಾರದ ಘಟನೆ ಡಿಸೆಂಬರ್ 25 ಹಾಗೂ 30ರ ನಡುವೆ ನಡೆದಿವೆ ಎಂದು ವರದಿಯಾಗಿದೆ.
ಈ ಗಲಭೆಯಲ್ಲಿ 24ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶ ಪೊಲೀಸರು 46 ಜನರನ್ನು ಬಂಧಿಸಿದ್ದರು.
ಲವ್ ಜಿಹಾದ್ ಅಥವಾ ಅಂತಹ ಯಾವುದೇ ಕೃತ್ಯವನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಲವ್ ಜಿಹಾದ್ ಮೂಲಕ ನಮ್ಮ ಮುಗ್ದ ಹೆಣ್ಣು ಮಕ್ಕಳನ್ನು ಆಕರ್ಶಿಸಲಾಗುತ್ತದೆ. ಇದರಿಂದ ಅವರ ಜೀವನ ಹಾಳಾಗುತ್ತದೆ. ಇಂತಹ ಘಟನೆಗಳನ್ನು ತಡೆಯಲು ನಾವು ಬಲವಾದ ಕಾನೂನು ರೂಪಿಸಿದ್ದೇವೆ. ನಮ್ಮ ಅಕ್ಕ-ತಂಗಿಯರು ಹಾಗೂ ಹೆಣ್ಣುಮಕ್ಕಳ ಜೀವನದ ಜೊತೆ ಆಟವಾಡುತ್ತಿದ್ದವರು ಈಗ ಯೋಚಿಸಬೇಕು. ಇದೀಗ ಸಣ್ಣ ಶಿಕ್ಷೆ ಮಾತ್ರ ವಿಧಿಸಲಾಗುವುದಿಲ್ಲ. ಬದಲಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂದರು.
ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ-2020ನ್ನು ಜಾರಿಗೆ ತಂದಿದೆ. ಇದರ ಪ್ರಕಾರ ವಿವಾಹದ ಬಳಿಕ ಅಥವಾ ಇನ್ನಾವುದೇ ರೀತಿಯ ಮೋಸ ಮಾಡಿ ಮತಾಂತರಗೊಳಿಸಿದರೆ ಅಂತಹವರಿಗೆ 10 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಈ ಕಾನೂನಿಗೆ ಇತ್ತೀಚೆಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.