ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಇಂದು ಸಿಸಿಬಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ವಿಚಾರಣೆ ಕುರಿತಂತೆ ಮಾಹಿತಿ ನೀಡಿದ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, ಡ್ರಗ್ಸ್ ಪ್ರಕರಣದಲ್ಲಿ ದಿಗಂತ್ ಮತ್ತು ಐಂದ್ರಿತಾ ಅವರಿಗೆ ನೋಟಿಸ್ ನೀಡಿದ್ದೆವು. ಅವರು ಕೂಡ ಇಂದು ವಿಚಾರಣೆಗೆ ಹಾಜರಾಗಿದ್ದರು. ಬೆಳಗ್ಗೆಯಿಂದ ಅವರ ವಿಚಾರಣೆ ನಡೆಸಿದ್ದು, ಸಾಕಷ್ಟು ಮಾಹಿತಿ ಲಭಿಸಿದೆ. ಇನ್ನೂ ಸ್ವಲ್ಪ ಸಮಯ ವಿಚಾರಣೆ ನಡೆಯಲಿದ್ದು, ಆ ಬಳಿಕ ಅವರಿಗೆ ಸಮನ್ಸ್ ನೀಡಿ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡುತ್ತೇವೆ ಎಂದರು.
ಈ ಹಿಂದೆ ನಟಿ ರಾಗಿಣಿ ಹಾಗೂ ಸಂಜನಾ ಅವರಿಗೆ ನೋಟಿಸ್ ನೀಡಿದ್ದ ಸಿಸಿಬಿ ಪೊಲೀಸರು ವಿಚಾರಣೆಗೆ ನಡೆಸಿ ಅವರನ್ನು ಬಂಧಿಸಿದ್ದರು. ಇಂದು ಕೂಡ ದಿಗಂತ್ ಹಾಗೂ ಐಂದ್ರಿತಾ ಅವರ ಬಂಧನವಾಗುತ್ತಾ ಎಂಬ ಅನುಮಾನ ಮೂಡಿತ್ತು. ಸದ್ಯ ಸಂದೀಪ್ ಪಾಟೀಲ್ ಅವರು ಸ್ಪಷ್ಟನೆ ನೀಡಿರುವುದರಿಂದ ಸ್ಟಾರ್ ದಂಪತಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಡ್ರಗ್ಸ್ ಪ್ರಕರಣದ ತನಿಖೆ ಕುರಿತಂತೆ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಗೃಹ ಸಚಿವ ಬೊಮ್ಮಾಯಿ ಅವರು, ಮುಂದಿನವಾರ ಡಗ್ಸ್ ಪ್ರಕರಣದ ವಿಚಾರಣೆ ಮಹತ್ವದ ಪಡೆದಿದೆ ಎಂದಿದ್ದರು. ಇತ್ತ ದಿಗಂತ್, ಐಂದ್ರಿತಾ ವಿಚಾರಣೆ ಬಳಿಕ ಮಾತನಾಡಿರುವ ಸಂದೀಪ್ ಪಾಟೀಲ್ ಅವರು, ವಿಚಾರಣೆಯ ಸಂದರ್ಭದಲ್ಲಿ ಸಾಕಷ್ಟು ಮಾಹಿತಿಗಳು ಸಿಕ್ಕಿದ್ದು, ಕೆಲವೊಂದು ಮಾಹಿತಿ ಹೇಳಿದ್ದಾರೆ ಎಂದಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೊಬ್ಬ ಪೆಡ್ಲರ್ ಅನ್ನು ಬಂಧಿಸಿದ್ದಾಗಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಆಫ್ರಿಕನ್ ಪ್ರಜೆ ಬೆನಾಲ್ಡ್ ಉಡೆನ್ನ ಎಂಬಾತನನ್ನು ಕಾಟನ್ ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ತನಿಖೆ ನಡೆಸಿದ ಸಂದರ್ಭದಲ್ಲಿ ಆರೋಪಿಯನ್ನು ಬಂಧಿಸಿದ್ದು, ಆತನಿಂದ ಕೊಕೇನ್ ಕೂಡ ವಶಕ್ಕೆ ಪಡೆದಿದ್ದಾರೆ. ಮೂರು ಮೊಬೈಲ್ ಬಳಕೆ ಮಾಡುತ್ತಿದ್ದ ಆರೋಪಿ, ಬೇರೆ ಬೇರೆ ಹೆಸರುಗಳೊಂದಿಗೆ ದೊಡ್ಡ ದೊಡ್ಡ ಪಾರ್ಟಿಗಳಿಗೆ ನಗರದಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ.