ಕೊಪ್ಪಳ: ಸಂಬಳದ ಸಮಸ್ಯೆ ಹಿನ್ನಲೆಯಲ್ಲಿ ಕೊಪ್ಪಳದ ಸಾರಿಗೆ ನೌಕರರೊಬ್ಬರು ತನ್ನ ಕಿಡ್ನಿ ಮಾರಾಟಕ್ಕಿಟ್ಟಿದ್ದಾರೆ.
ಕುಷ್ಟಗಿಯ ನಿವಾಸಿ ಹನುಮಂತ ಕಳಗೇರ್ ತನ್ನ ಕಿಡ್ನಿಯನ್ನು ಮಾರಾಟಕ್ಕಿಟ್ಟಿವರಾಗಿದ್ದಾರೆ. ಕಳೆದ 20 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಬಳ ಸರಿಯಾಗಿ ಸಿಗುತ್ತಿಲ್ಲ, ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಕಿಡ್ನಿ ಮಾರಾಟಕ್ಕಿಟ್ಟಿದ್ದಾರೆ.
ಗಂಗಾವತಿ ಡಿಪೋದಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಲಾಕ್ ಡೌನ್ ನಿಂದ ಸರಿಯಾಗಿ ಸಂಬಳ ಆಗಿಲ್ಲ. ಜೊತೆಗೆ ಕಳೆದ ಎರಡು ತಿಂಗಳಿಂದ ಅರ್ಧ ಸಂಬಳ ಆಗುತ್ತಿದ್ದು, ಇದರಿಂದಾಗಿ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಮನೆ ಬಾಡಿಗೆ ಕಟ್ಟಲಾಗುತ್ತಿಲ್ಲ. ರೇಷನ್ ತರಲು ಆಗುತ್ತಿಲ್ಲ ಕಾರಣ ನನ್ನ ಕಿಡ್ನಿಯನ್ನು ಮಾರಾಟಕ್ಕಿಟ್ಡಿದ್ದೇನೆ ಎಂದು ಹನುಮಂಹ ಕಳಗೇರ್ ಫೇಸಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಹನುಮಂತ ಅವರಿಗೆ ಪ್ರತಿ ತಿಂಗಳು 16 ಸಾವಿರ ಸಂಬಳ ಬರುತ್ತಿತ್ತು, ಆದರೆ ಕಳೆದ ಎರಡು ತಿಂಗಳಿನಿಂದ 3 ಸಾವಿರ ಸಂಬಳ ಬರುತ್ತಿದ್ದು, ಆದರೆ ತಿಂಗಳಿಗೆ 3500 ಸಾವಿರ ಮನೆ ಬಾಡಿಗೆಯೇ ಇದ್ದು, ಮೂರು ಮಕ್ಕಳು, ತಾಯಿ, ಪತ್ನಿಯನ್ನು ಸಾಕಬೇಕಾಗಿದೆ. ಜೀವನ ನಡೆಸಲು ಕಷ್ಟವಾಗುತ್ತಿದ್ದು, ಈಗಾಗಲೇ ಎಲ್ಲಾ ಕಡೆ ಕೈಸಾಲ ತೆಗೆದು ಕೊಂಡಿರುವ ಹನುಮಂತ ಅವರಿಗೆ ಸಾಲ ಮರಳಿ ನೀಡಲು ಹಣ ಇಲ್ಲದಂತಾಗಿದ್ದು ಈ ನಿರ್ಧಾರಕ್ಕೆ ಬಂದಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ತನ್ನ ನೋವನ್ನು ಹನುಮಂತ ಅವರು ತೋಡಿಕೊಂಡಿದ್ದಾರೆ. ಕಡಿಮೆ ಸಂಬಳದಿಂದಾಗಿ ವಯಸ್ಸಾದ ತಾಯಿಗೆ ಆಸ್ಪತ್ರೆಗೆ ತೋರಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ತೊಂದರೆ ಆಗುತ್ತಿದ್ದು, ಸರರ್ಕಾರ ಈಗಾಲಾದರೂ ಎಚ್ಚೆತ್ತುಕೊಂಡು ಸಾರಿಗೆ ನೌಕರರಿಗೆ ಪೂರ್ತಿ ಸಂಬಳ ನೀಡಬೇಕು ಎಂದು ಮನವಿ ಮಾಡಿದ್ದಾರೆ.