ಉಡುಪಿ: ರಾಜ್ಯ ಬಿಜೆಪಿಯಲ್ಲಿ ಒಳ ಬೇಗುದಿ ಜೋರಾಗಿದೆ. ನಾಯಕತ್ವ ಬದಲಾವಣೆ ಚರ್ಚೆ ಬಿಸಿಬಿಸಿಯಾಗಿರುವಾಗಲೇ ಉಡುಪಿಯಲ್ಲಿ ಎಲ್ಲರ ಗಮನ ಸೆಳೆಯುವ ರಾಜಕೀಯ ವಿದ್ಯಾಮಾನವೊಂದು ನಡೆದಿದೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಪಾಳುಬಿದ್ದ ಕೃಷಿಭೂಮಿಗೆ ಕಾಯಕಲ್ಪ ನೀಡುವ ಕೆಲಸ ನಡೆಯುತ್ತಿದೆ. ಹಡಿಲು ಭೂಮಿಯಲ್ಲಿ ಬೆಳೆ ಬೆಳೆಸುವ ಕೇದಾರೋತ್ಥಾನ ಅಭಿಯಾನದ ಹೆಸರಲ್ಲಿ ಸುಮಾರು 2,000 ಎಕರೆಗಳಷ್ಟು ಹೆಚ್ಚಿನ ಭತ್ತದ ಬೇಸಾಯ ನಡೆಯುತ್ತಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಶಾಸಕರು ಪಾಳುಬಿದ್ದ ಗದ್ದೆಗಳನ್ನು ಮರುಜೀವ ಗಳಿಸುವುದರಲ್ಲಿ ನಿರತರಾಗಿದ್ದು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದರೂ ಕಾಂಗ್ರೆಸ್ ಪರೋಕ್ಷ ಟೀಕೆಗೂ ಮಾಡಿತ್ತು. ಕೊರೊನಾ ಕಂಟ್ರೋಲ್ ಕಡೆ ಗಮನ ಕೊಡಿ, ಬೇಸಾಯ ಗದ್ದೆಯಿಂದ ಮೇಲೆ ಬನ್ನಿ ಎಂದು ಕುಟುಕಿತ್ತು. ಇದನ್ನೂ ಓದಿ: ಬಿಎಸ್ವೈಗೆ ಆಡಳಿತ ನಡೆಸಲು ಆಗುತ್ತಿಲ್ಲ,ಅವರ ಪುತ್ರ ಆಡಳಿತ ನಡೆಸುತ್ತಿದ್ದಾರೆ: ಶಾಸಕ ಶರಣಬಸಪ್ಪ ದರ್ಶನಾಪುರ
ಇತ್ತೀಚೆಗೆ ಬಿ.ಆರ್ ಶೆಟ್ಟಿ ಸರ್ಕಾರಿ ಆಸ್ಪತ್ರೆ ವಿಚಾರದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಇತರರು ಹಡಿಲು ಬಿದ್ದ ಅಭಿವೃದ್ಧಿ ಕಾರ್ಯಗಳ ಕಡೆ ಗಮನಹರಿಸುವಂತೆ ಶಾಸಕರಿಗೆ ಚಿವುಟಿದ್ದರು. ಇದೀಗ ಅದೇ ಹಡಿಲು ಗದ್ದೆ ಅಭಿಯಾನ ಇಬ್ಬರು ರಾಜಕೀಯ ವಿರೋಧಿಗಳನ್ನು ಒಂದು ಮಾಡಿದೆ.
ಮಾಜಿ ಸಚಿವ ಪ್ರಮೋದ್ ಉಪ್ಪೂರು ಗ್ರಾಮಸ್ಥ. ಶಾಸಕ ರಘುಪತಿ ಭಟ್ ಮತ್ತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜಂಟಿಯಾಗಿ ಭತ್ತದ ಗದ್ದೆ ನಾಟಿ ಮಾಡಿದ್ದಾರೆ. ಉದ್ಘಾಟನೆ ನಂತರ ಕೆಲಕಾಲ ಭತ್ತದ ಪೈರಿನ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡರು. ರಾಜಕೀಯ ಕ್ಷೇತ್ರದಲ್ಲಿ ಇವರಿಬ್ಬರು ಪ್ರತಿಸ್ಪರ್ಧಿಗಳಾದರೂ ಬಾಲ್ಯದಲ್ಲಿ ಕ್ಲಾಸ್ ಮೇಟ್ಸ್ ಆಗಿದ್ದರು.