ಶಿವಮೊಗ್ಗ: ಮಾಧ್ಯಮಗಳ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ.
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ರಾಜ್ಯದಲ್ಲಿನ ಅನೇಕ ಟಿವಿ ಚಾನಲ್ ನೋಡಿದರೆ, ಏನು ಪ್ರಪಂಚದಲ್ಲಿ ಇನ್ನೂ ಯಾರೂ ಬದುಕುವುದಿಲ್ಲವೇನೋ ಅನ್ನುವ ರೀತಿ ಹೈಲೈಟ್ ಮಾಡುತ್ತಿದ್ದಾರೆ. ಕೆಲವು ಶವ ಹೊತ್ತುಕೊಂಡು ಹೋಗುತ್ತಿರುವಂತಹ ರೂಪ ತೋರಿಸೋದನ್ನು ನೋಡಿದರೆ, ಯಾರೂ ಕೂಡ ಮೃತದೇಹಗಳಿಗೆ ಇಡೀ ರಾಜ್ಯದಲ್ಲಿ ಮಾಡುತ್ತಿರುವ ವ್ಯವಸ್ಥೆ ಅನಾಗರೀಕ ವ್ಯವಸ್ಥೆ ಎನ್ನುವ ಭಾವನೆ ತರುತ್ತಿದ್ದಾರೆ ಎಂದು ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ.
ರಾಜ್ಯ ಸರ್ಕಾರ ಇಷ್ಟು ಶ್ರಮ ಹಾಕಿದರೂ ಕೂಡ ಏನು ವ್ಯವಸ್ಥೆ ಇಲ್ಲವೇನೋ ಎನ್ನುವ ರೀತಿ ಕಾಣುತ್ತಿದೆ. ಜನ ಹೋಂ ಕ್ವಾರಂಟೈನ್ಗೆ ಅವಕಾಶ ಕೊಟ್ಟರು ಇಷ್ಟಪಡುತ್ತಿಲ್ಲ. ಈ ಮೊದಲು ಬಿಸಿ ನೀರು ಸಿಗುತ್ತಿಲ್ಲ. ಸರಿಯಾಗಿ ಶೌಚಾಲಯ ಸ್ವಚ್ಛತೆ ಇಲ್ಲ, ವ್ಯವಸ್ಥೆ ಸರಿ ಇಲ್ಲ ಅನ್ನುತ್ತಿದ್ದರು. ಈಗ ಎಲ್ಲಾ ವ್ಯವಸ್ಥೆ ಸರಿ ಇದೆ ಎಂದು ತಿಳಿಸಿದರು.
ಕ್ವಾರಂಟೈನ್ನಲ್ಲಿ ಇರುವುದು 8-10 ದಿನ. ಆ ದಿನದಲ್ಲಿ ಅವರೇನು ಹನಿಮೂನ್ಗೆ ಹೋಗಲ್ಲ. ಸ್ವಲ್ಪ ಹೊಂದಿಕೊಳ್ಳುವುದಕ್ಕೆ ಆಗಲಿಲ್ಲ ಅಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು?. ನಮ್ಮಿಂದ ಏನು ಸಾಧ್ಯವೋ ಎಲ್ಲ ವ್ಯವಸ್ಥೆ ಮಾಡುತ್ತಿದ್ದೇವೆ. ಕೆಲವರಿಗೆ ಹೋಂ ಕ್ವಾರಂಟೈನ್ಗೂ ಅವಕಾಶ ಮಾಡಿಕೊಟ್ಟಿದ್ದೀವಿ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.