ಹುಬ್ಬಳ್ಳಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರ ಸಪ್ಟೆಂಬರ್ 14ರೊಳಗೆ ಅಂತಿಮ ನಿರ್ಧಾರ ಕೈಗೊಳ್ಳದ್ದರೆ ಮತ್ತೆ ಹೋರಾಟದ ಮುನ್ಸೂಚನೆ ದೊರೆತಿದೆ.
ಹುಬ್ಬಳ್ಳಿಯಲ್ಲಿಂದು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಅಭಿಯಾನ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಸಮಾಜದ ಮುಖಂಡರು ಹಾಗೂ ಸ್ವಾಮೀಜಿ ಪಂಚ ನಿರ್ಣಯಗಳನ್ನ ಕೈಗೊಂಡು, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಂಚ ನಿರ್ಣಯಗಳ್ಯಾವು?
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ವಿಧಾನಸೌಧದ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜಕ್ಕೆ ಸಪ್ಟೆಂಬರ್ 21ರೊಳಗೆ 2ಎ ಮೀಸಲಾತಿ ನೀಡುವ ಬಗ್ಗೆ ಭರವಸೆ ನೀಡಿದ್ದರು. ಹಿಂದಿನ ಸಿಎಂ ಭರವಸೆ ಪ್ರಕಾರ ಸಪ್ಟೆಂಬರ್ 14ರೊಳಗೆ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಮತ್ತೆ ನೆನಪಿಸುವ ನಿಟ್ಟಿನಲ್ಲಿ ಅಗಸ್ಟ್ 26ರಿಂದ ಮಲೆಮಹದೇಶ್ವರ ಬೆಟ್ಟದಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಅಭಿಯಾನ ಕೈಗೊಳ್ಳುವುದು.
ಮೀಸಲಾತಿ ನೀಡುವ ಕುರಿತು ಹಕ್ಕೊತ್ತಾಯ ಮಂಡನೆ ಮಾಡಲು ಸಪ್ಟೆಂಬರ್ 1ರಂದು ಮಾಜಿ ಸಿಎಂ ಜೆ.ಎಚ್.ಪಟೇಲರ ಜಯಂತಿಯಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ಮುಂದುವರೆಸಲಾಗುವುದು. ಕುರುಬ, ವಾಲ್ಮೀಕಿ, ಮಡಿವಾಳ, ಗಂಗಾಮತ, ಆದಿಬಣಜಿಗ, ಕುಡುವಕ್ಕಲಿಗ ಹಾಗೂ ಉಳಿದ ಸಮಾಜಗಳ ಬೇಡಿಕೆಗಳ ಅನುಗುಣವಾಗಿ ಬೇಡಿಕೆಗಳನ್ನ ಈಡೇರಿಸುವುದು ಸೇರಿದಂತೆ ಮೀಸಲಾತಿ ಕೊಡಿಸುವ ವಿಚಾರದಲ್ಲಿ ಸಮಾಜದ ಪರವಾಗಿ ಸಂಧಾನಕಾರರಾಗಿ ಸಚಿವ ಸಿ.ಸಿ.ಪಾಟೀಲರಿಗೆ ಜವಾಬ್ದಾರಿ ವಹಿಸಿವುದು. ಅಲ್ಲದೆ ನೂತನ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪಂಚಮಸಾಲಿ ಸಮುದಾಯ ಆಶೀರ್ವಾದ ನೀಡುತ್ತದೆ ಎನ್ನುವ ಪಂಚ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.