ಬಿಗ್ ಬಾಸ್ ಮನೆಯಲ್ಲಿ 60ನೇ ದಿನ ನಡೆದ ‘ನುಸುಳಿದ ಚೆಂಡು’ ಟಾಸ್ಕ್ ವಿಚಾರದಲ್ಲಿ ಅರವಿಂದ್ ಗೆದ್ದ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತದೆ.
ಮೂವರು ಸ್ಪರ್ಧಿಗಳ ಕೈ ಮತ್ತು ಕಾಲನ್ನು ಕಟ್ಟಲಾಗುತ್ತದೆ. ಸ್ಪರ್ಧಿಗಳು ತಲೆಯಿಂದ ಚೆಂಡನ್ನು ಗೆರೆ ದಾಟಿಸಬೇಕು. ಚೆಂಡಿನ ಜೊತೆಗೆ ಮೊದಲು ಗೆರೆ ಮುಟ್ಟಿದ ಸದಸ್ಯ ಮೊದಲ ಬೋಗಿಗೆ ಹೋಗುತ್ತಾರೆ ಎನ್ನುವುದು ಈ ಆಟದ ನಿಯಮವಾಗಿತ್ತು.
ಚಕ್ರವರ್ತಿ ಚಂದ್ರಚೂಡ್ ಈ ನಿಯಮವನ್ನು ಹೇಳಿದ ಕೂಡಲೇ ಪ್ರಿಯಾಂಕ ಅವರು, ಒಂದು ವೇಳೆ ಬಾಲ್ ಹಳದಿ ಗೆರೆಯನ್ನು ದಾಟಿದರೆ ಔಟ್ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮಂಜು, ಔಟ್ ಆಗಲ್ಲ, ಆದರೆ ಚೆಂಡನ್ನು ತಲೆಯ ಸಹಾಯದಿಂದ ಮುಂದಕ್ಕೆ ತಳ್ಳಬೇಕು ಎಂದು ಉತ್ತರ ನೀಡುತ್ತಾರೆ.
ಅರವಿಂದ್, ಪ್ರಶಾಂತ್ ಸಂಬರಗಿ ಮೂವರು ಸಿದ್ಧವಾಗಿ ಆಟ ಆಡಲು ಪ್ರಾರಂಭಿಸುತ್ತಾರೆ. ಆರಂಭದಲ್ಲಿ ಅರವಿಂದ್ ಬಾಲ್ ಹಳದಿ ಗೆರೆ ದಾಟಿ ಪ್ರಶಾಂತ್ ಸಂಬರಗಿ ಟ್ರ್ಯಾಕ್ಗೆ ಬರುತ್ತದೆ. ಈ ವೇಳೆ ಮುನ್ನುಗ್ಗುವ ಬರದಲ್ಲಿ ಪ್ರಶಾಂತ್ ಸಂಬರಗಿ ತಲೆ ಅರವಿಂದ್ ಚೆಂಡಿಗೆ ತಾಗಿದ ಕಾರಣ ಅರವಿಂದ್ ಚೆಂಡು ಪ್ರಿಯಾಂಕ ಟ್ರ್ಯಾಕ್ಗೆ ಹೋಗುತ್ತದೆ. ಈ ಚೆಂಡನ್ನು ಪಡೆಯುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದ್ದಾಗ ಪ್ರಿಯಾಂಕ ಅವರ ಟ್ರ್ಯಾಕ್ನಲ್ಲಿದ್ದ ಚೆಂಡಿಗೆ ಅರವಿಂದ್ ಕಾಲು ಆಕಸ್ಮಾತ್ ಆಗಿ ಸಿಕ್ಕಿದ ಪರಿಣಾಮ ಪಿಂಕ್ ಚೆಂಡು ಟ್ರ್ಯಾಕ್ನಿಂದ ದೂರ ಹೋಗುತ್ತದೆ. ನಂತರ ಅರವಿಂದ್ ಪ್ರಿಯಾಂಕ ಟ್ರ್ಯಾಕ್ನಲ್ಲಿ ಮುಂದಕ್ಕೆ ಹೋಗಿ ಬಾಲನ್ನು ಕೆಂಪು ಗೆರೆ ದಾಟಿಸುತ್ತಾರೆ.
ಆರಂಭದಲ್ಲಿ ಪ್ರಶಾಂತ್ ಸಂಬರಗಿ ಜಯಗಳಿಸಿದ್ದಾರೆ ಎಂದು ಮಂಜು ಹೇಳಿದ್ದರೂ ನಂತರ ಅರವಿಂದ್, ನನ್ನ ಚೆಂಡು ರೆಡ್ಲೈನ್ ಕ್ರಾಸ್ ಆಗಿದೆ. ಜೊತೆಗೆ ಆಚೆ ಕಡೆಯಿಂದ ನಾನು ಲೈನ್ ಕ್ರಾಸ್ ಮಾಡಿದ್ದೇನೆ. ಒಮ್ಮೆ ಯೋಚನೆ ಮಾಡಿ ಎಂದು ಹೇಳುತ್ತಾರೆ. ಕೊನೆಗೆ ಹಲವು ಚರ್ಚೆಗಳು ನಡೆದು ಮಂಜು, ವೈಷ್ಣವಿ, ಚಂದ್ರಚೂಡ್ ಅವರು ಅರವಿಂದ್ ಗೆದ್ದಿದ್ದಾರೆ. ಪ್ರಶಾಂತ್ ಸಂಬರಗಿ ಎರಡನೇ ಸ್ಥಾನ, ಪ್ರಿಯಾಂಕಗೆ ಮೂರನೇ ಸ್ಥಾನ ಘೋಷಿಸುತ್ತಾರೆ.
ಈಗ ಅರವಿಂದ್ ಗೆದ್ದ ಬಗ್ಗೆ ಭಾರೀ ಚರ್ಚೆ ನಡೆಯುತ್ತದೆ. ಕೆಲವರು ಪ್ರಿಯಾಂಕ ಗೆದ್ದಿದ್ದಾರೆ ಎಂದು ಹೇಳಿದ್ದರೆ ಇನ್ನೂ ಕೆಲವರು ಅರವಿಂದ್ ಗೆದ್ದಿದ್ದಾರೆ ಎಂದು ವಾದಿಸುತ್ತಾರೆ.
ಕ್ರೀಡಾ ನಿಯಮದ ಪ್ರಕಾರ ಅರವಿಂದ್ ಮಾಡಿದ್ದು ತಪ್ಪು ಇರಬಹುದು. ಆದರೆ ಬಿಗ್ ಬಾಸ್ ನಿಯಮದ ಪ್ರಕಾರ ಇದು ತಪ್ಪಲ್ಲ. ಯಾಕೆಂದರೆ ಸ್ಪರ್ಧೆ ಆರಂಭಕ್ಕೂ ಮೊದಲೇ ಪ್ರಿಯಾಂಕ, ಚೆಂಡು ಒಂದು ವೇಳೆ ಹಳದಿ ಗೆರೆ ದಾಟಿದರೆ ಆಗ ಏನು ಎಂದು ಪ್ರಶ್ನೆ ಕೇಳಿದ್ರು. ಆಗಲೇ ಔಟ್ ಎಂದು ಹೇಳಿದ್ದರೆ ವಿವಾದವೇ ಇರುತ್ತಿರಲಿಲ್ಲ. ಆರಂಭದಲ್ಲಿ ಈ ನಿಯಮವನ್ನು ಮೂವರು ಒಪ್ಪಿದ ಕಾರಣ ನಂತರ ಟಾಸ್ಕ್ ನಡೆದಿದೆ. ಟಾಸ್ಕ್ ನಡೆದ ಬಳಿಕ ಸರಿಯಲ್ಲ ಎಂದು ಹೇಳುವುದು ತಪ್ಪು ಎಂದು ಹೇಳುತ್ತಿದ್ದಾರೆ.
ಇನ್ನು ಕೆಲವರು ಈ ಟಾಸ್ಕ್ ನಲ್ಲಿ ಪ್ರಶಾಂತ್ ಸಂಬರಗಿ ಜಯಗಳಿಸಿದ್ದಾರೆ. ಆದರೆ ಪ್ರಶಾಂತ್ ಅವರನ್ನು ಇಷ್ಟಪಡದ ಕಾರಣ ಮಂಜು ಅವರು ಅರವಿಂದ್ ಅವರನ್ನು ಸಪೋರ್ಟ್ ಮಾಡಿದ್ದಾರೆ. ಇದು ಮಂಜು ಮಾಡಿದ ಕುತಂತ್ರ ಎಂದು ದೂರುತ್ತಿದ್ದಾರೆ. ಇದಕ್ಕೆ ಅರವಿಂದ್ ಅಭಿಮಾನಿಗಳು, ಆರಂಭದಲ್ಲಿ ಅರವಿಂದ್ ಚೆಂಡು ಸಂಬರಗಿ ಟ್ರ್ಯಾಕ್ಗೆ ಬಂದಾಗ ಸಂಬರಗಿ ತಲೆಗೆ ಸಿಕ್ಕಿ ಅದು ಪ್ರಿಯಾಂಕ ಟ್ರ್ಯಾಕ್ಗೆ ಹೋಗಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದೋ ಅಥವಾ ಅಕಸ್ಮಾತ್ ಆಗಿದ್ದೋ ಎಂದು ಪ್ರಶ್ನಿಸುತ್ತಿದ್ದಾರೆ.
ಪ್ರಶಾಂತ್ ಸಂಬರಗಿ ಅವರು ಕಳೆದ ವಾರದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ರಾಘುಗೆ ಎಲ್ಲ ಹೂಗಳನ್ನು ನೀಡಿದ್ದರು. ಇದು ಟಾಸ್ನ್ ನಲ್ಲಿ ಇತ್ತಾ? ರಾಜೀವ್ ವಿನ್ ಆಗಬಾರದು ಎಂಬ ಒಂದೇ ಕಾರಣಕ್ಕೆ ಈ ತಂತ್ರ ಮಾಡಿದ್ದರು. ಇಲ್ಲಿ ಅರವಿಂದ್ ಉದ್ದೇಶಪೂರ್ವಕವಾಗಿ ಮಾಡಿದ್ದರೆ ಇದು ತಪ್ಪು ಎಂದು ಹೇಳಬಹುದಿತ್ತು. ಆದರೆ ಇಲ್ಲಿ ಆಕಸ್ಮತ್ ಆಗಿರುವ ಕಾರಣ ಬಾಲ್ ಟ್ರ್ಯಾಕ್ನಿಂದ ಹೊರಗಡೆ ಹೋಗಿದ್ದು ನಿಜ. ಹೊರಗಡೆ ಹೋದರೂ ಕುಗ್ಗದೇ ಪ್ರಯತ್ನ ಬಿಡದೇ ಬಾಲನ್ನು ಕೆಂಪು ಗೆರೆಯನ್ನು ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪ್ರಿಯಾಂಕ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ವಾದಿಸುತ್ತಿದ್ದಾರೆ.
ಇನ್ನು ಕೆಲವರು ಮೊದಲೇ ನಿಯಮಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಿತ್ತು. ನಿಯಮ ಸ್ಪಷ್ಟವಾಗಿ ತಿಳಿಯದ ಆಟ ಆಡಿದ್ದರಿಂದ ಈ ಗೊಂದಲವಾಗಿದೆ. ಅಂತಿಮವಾಗಿ ನಾಯಕರು ಏನು ಹೇಳುತ್ತಾರೋ ಅದೇ ಫೈನಲ್. ಅದನ್ನು ಎಲ್ಲರೂ ಒಪ್ಪಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಚರ್ಚೆ ಈಗ ಜೋರಾಗಿ ನಡೆಯುತ್ತಿದ್ದು, ನಿಮ್ಮ ಪ್ರಕಾರ ಈ ಟಾಸ್ಕ್ ನಲ್ಲಿ ವಿನ್ ಯಾರು ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ.