ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ನಾಯಕ ರಿಷಬ್ ಪಂತ್ ಐಪಿಎಲ್ನಲ್ಲಿ ಕನಿಷ್ಠ-ಓವರ್ ರೇಟ್ ದಂಡದ ಬಗ್ಗೆ ಭಾರೀ ತಲೆ ಕೆಡಿಸಿಕೊಂಡಂತೆ ಕಂಡು ಬಂದಿದೆ. ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕ ಪಂತ್, ಅಂಪೈರ್ ಒಂದು ನಿಮಿಷ ತಡೆದು ಬೌಲ್ ಮಾಡಿಸಿದ್ದಕ್ಕೆ ಈ ಒಂದು ನಿಮಿಷವನ್ನು ವ್ಯರ್ಥಮಾಡಿದ್ದು ನೀವು ನಾನಲ್ಲ ಎಂದು ಅಂಪೈರ್ ಗೆ ಹೇಳಿದ್ದಾರೆ
14ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮೊದಲು ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಭುಜದ ನೋವಿನಿಂದ ಐಪಿಎಲ್ನಿಂದ ದೂರ ಸರಿದಿದ್ದರು. ಅವರ ಬದಲಾಗಿ ಪಂತ್ ಅವರಿಗೆ ಡೆಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ಹೊರಿಸಲಾಗಿತ್ತು. ನಾಯಕತ್ವದ ಹೊಣೆ ಹೊತ್ತಿರುವ ಪಂತ್ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದು, ಮೊದಲ ಪಂದ್ಯವನ್ನು ಚೆನ್ನೈ ವಿರುದ್ಧ ಗೆದ್ದು ಬೀಗಿತ್ತು. ಅದರೆ ಎರಡನೇ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಮುಗ್ಗರಿಸಿದೆ. ಆದರೂ ಕೂಡ ಪಂತ್ ನಾಯಕತ್ವಕ್ಕೆ ಮಾತ್ರ ಮೆಚ್ಚುಗೆ ವ್ಯಕ್ತವಾಗಿದೆ.
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಆರ್ ಅಶ್ವಿನ್ ಬೌಲಿಂಗ್ ಬಂದಾಗ ಅಂಪೈರ್ 30 ಅಡಿ ದೂರದಲ್ಲಿ ಫೀಲ್ಡರ್ ಗಳು ನಿಂತಿದ್ದಾರ ಎಂದು ನೋಡುವುದಕ್ಕಾಗಿ ಅಶ್ವಿನ್ ಅವರನ್ನು ತಡೆದು ಪರಿಶೀಲನೆಗೆ ಇಳಿದಿದ್ದಾರೆ. ಇದನ್ನು ಗಮನಿಸಿದ ಪಂತ್ ಈ ಒಂದು ನಿಮಿಷವನ್ನು ನೀವು ವ್ಯರ್ಥ ಮಾಡಿರುವುದು. ಪಂದ್ಯ ಲೇಟ್ ಆಗಿದೆ ಎಂದು ನನಗೆ ದಂಡಹಾಕುವಂತಿಲ್ಲ ಎಂದು ಅಂಪೈರ್ ಗೆ ಸೂಚ್ಯವಾಗಿ ಹೇಳಿದ್ದಾರೆ. ಪಂತ್ ಮಾತು ಇದು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದೆ. ಇದನ್ನು ಗಮನಿಸಿರುವ ಪಂತ್ ಅಭಿಮಾನಿಗಳು ಅವರ ಕ್ಯಾಪ್ಟನ್ಸಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಪಂತ್ ಈ ರೀತಿ ಹೇಳಲು ಕಾರಣ ಐಪಿಎಲ್ನ ನಿಯಮ. 14ನೇ ಆವೃತ್ತಿಯ ಐಪಿಎಲ್ನ ನಿಯಮದ ಪ್ರಕಾರ ಪಂದ್ಯ ಸರಿಯಾದ ಸಮಯಕ್ಕೆ ಮುಗಿಯಬೇಕು. ಇಲ್ಲದೆ ಹೋದರೆ ಕನಿಷ್ಠ-ಓವರ್ ರೇಟ್ ಅಪರಾಧದಗಳಿಗೆ ಸಂಬಂಧಿಸಿದಂತೆ, ಐಪಿಎಲ್ ನೀತಿ ಸಂಹಿತೆ ಅಡಿಯಲ್ಲಿ ತಂಡದ ನಾಯಕನಿಗೆ ದಂಡ ಹಾಕಲಾಗುತ್ತದೆ ಇದನ್ನು ತಪ್ಪಿಸುವ ಸಲುವಾಗಿ ಪಂತ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಚೆನ್ನೈ ಮತ್ತು ಡೆಲ್ಲಿ ನಡುವಿನ ಪಂದ್ಯದಲ್ಲಿ ಕನಿಷ್ಠ-ಓವರ್ ರೇಟ್ ಕಾಯ್ದುಕೊಳ್ಳಲು ವಿಫಲವಾಗಿದ್ದ ಚೆನ್ನೈ ತಂಡದ ನಾಯಕ ಎಂ.ಎಸ್ ಧೋನಿ ಅವರಿಗೆ 12 ಲಕ್ಷ ರೂಪಾಯಿ ದಂಡ ಬಿದ್ದಿತ್ತು. ಇದನ್ನು ಗಮನಿಸಿರುವ ಪಂತ್ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡದ ಆಟಗಾರರು ಬೇಗನೆ ಓವರ್ ಎಸೆದು ಮುಗಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದರು.