– ಯುಪಿಯಲ್ಲಿ ಮುಸ್ಲಿಂ ನಾಯಕತ್ವದ ಸ್ಥಾಪನೆ ನನ್ನ ಗುರಿ
ನವದೆಹಲಿ: ಉತ್ತರ ಪ್ರದೇಶದ ಚುನಾವಣೆಯಲ್ಲಿ ನಾನೇನು ಕಿಂಗ್ ಮೇಕರ್ ಮತ್ತು ಗೇಮ್ ಬ್ರೇಕರ್ ಅಲ್ಲವೇ ಅಲ್ಲ. ನಾನು ಬಂದಿರೋದು ಇಲ್ಲಿ ಮುಸ್ಲಿಂ ನಾಯಕತ್ವದ ಸ್ಥಾಪನೆಗೆ ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಖಾಸಗಿ ವಾಹಿನಿಯ ಸಂವಾದದಲ್ಲಿ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶ ಚುನಾವಣೆ ಕುರಿತ ಮಾಹಿತಿಯನ್ನು ಹಂಚಿಕೊಂಡರು. ಈ ಸಂವಾದದಲ್ಲಿ ಪತ್ರಕರ್ತರೊಬ್ಬರು, ನೀವು ಬಿಹಾರದ ಚುನಾವಣೆಯಲ್ಲಿ ಗೇಮ್ ಬ್ರೇಕರ್ ಅನ್ನೋದನ್ನ ವಿಪಕ್ಷಗಳಿಗೆ ಸಾಬೀತು ಮಾಡಿದ್ದೀರಿ. ಅದೇ ರೀತಿ ಆರ್ಜೆಡಿ ಆಟವನ್ನು ಬ್ರೇಕ್ ಮಾಡಿದ್ದು ನೀವೇ ಅಲ್ವಾ? ಬಿಹಾರದ ಚುನಾವಣೆಯಲ್ಲಿ ನಿಮ್ಮ ರಾಜಕೀಯದ ಚದುರಂಗದಾಟ ಮಹತ್ವಪೂರ್ಣವಾಗಿತ್ತು. ಅದೇ ರೀತಿಯ ತಂತ್ರಗಳು ಉತ್ತರ ಪ್ರದೇಶದಲ್ಲಿಯೂ ಪ್ರಯೋಗಿಸಿ ಕಿಂಗ್ ಮೇಕರ್ ಅಥವಾ ಗೇಮ್ ಬ್ರೇಕರ್ ಆಗ್ತೀರಾ ಎಂದು ಪ್ರಶ್ನಿಸಿದ್ದರು.
ಈ ಪ್ರಶ್ನೆಗೆ ಉತ್ತರಿಸಿದ ಓವೈಸಿ, ಬಿಹಾರ ಚುನಾವಣೆಯನ್ನು ನೀವು ಹೇಗೆ ಬೇಕಾದ್ರೂ ವಿಶ್ಲೇಷನೆ ಮಾಡಬಹುದು. ಅಲ್ಲಿ ನಮಗೆ ಜನತೆಗೆ ಆಶೀರ್ವಾದ ಸಿಕ್ಕಿದೆ. ಆದ್ರೆ ಉತ್ತರ ಪ್ರದೇಶದಲ್ಲಿ ನನ್ನ ಗುರಿಯೇ ಬೇರೆಯಾಗಿದೆ. ಇಲ್ಲಿ ಮುಸ್ಲಿಂ ಸಮುದಾಯದಲ್ಲಿ ನಾಯಕತ್ವ ಸ್ಥಾಪನೆಗೆ ಬಂದಿದ್ದೇನೆ. ಇಲ್ಲಿ ನಾನು ಬಂದಿರೋದು ನಾಯಕನಾಗಲು ಅಲ್ಲ. ನಾವು ಕಳೆದ 65 ವರ್ಷಗಳಿಂದ ಸೆಕ್ಯೂಲರ್ ಹೆಸರಿನ ಪಾರ್ಟಿಯಲ್ಲಿ ಫುಟ್ಬಾಲ್ ಆಗಿದ್ದೇವೆ ಎಂದರು.
ಬಿಜೆಪಿಯವರು ಹಿಂದೂ ಸಹೋದರರಿಗೆ ನಮ್ಮ ಭಯ ತೋರಿಸುತ್ತಾರೆ. ಇದೇ ರೀತಿ ಹಲವರು ತಮ್ಮ ಲಾಭಕ್ಕಾಗಿ ರಾಜಕೀಯದಾಟ ಆಡುತ್ತಿದ್ದಾರೆ. ಹಾಗಾಗಿ ಇಲ್ಲಿ ನಮ್ಮ ಸಮುದಾಯಕ್ಕೆ ನಾಯಕತ್ವದ ಅಗತ್ಯವಿದೆ. ಯಾರು ಏನು ಬೇಕಾದ್ರೂ ರಾಜಕೀಯ ಮಾಡಲಿ, ಅದಕ್ಕೆ ನನಗೆ ಸಂಬಂಧವಿಲ್ಲ. ನಾನು ಮಾತ್ರ ನನ್ನ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 403ರಲ್ಲಿ 400 ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ: ಅಖಿಲೇಶ್ ಯಾದವ್