– ಕೆಲಸ ಕಳೆದುಕೊಂಡ ಪೊಲೀಸ್ ಅಧಿಕಾರಿ
ತಿರುವನಂತಪುರಂ: ತಂದೆಯೊಂದಿಗೆ ಠಾಣೆಗೆ ಬಂದ ಯುವತಿ ಜೊತೆ ಪೊಲೀಸ್ ಅಧಿಕಾರಿಯೊಬ್ಬ ಅಸಭ್ಯವಾಗಿ ವರ್ತಿಸಿ, ಇದೀಗ ಕೆಲಸ ಕಳೆದುಕೊಂಡ ಘಟನೆ ಕೇರಳದಲ್ಲಿ ನಡೆದಿದೆ.
ಅಮಾನತ್ತಾದ ಅಧಿಕಾರಿಯನ್ನು ಗೋಪಕುಮಾರ್ ಎಂದು ಗುರುತಿಸಲಾಗಿದ್ದು, ಈತ ತಿರುವನಂತಪುರಂನ ನೆಯ್ಯಡ್ರಾಮ್ ಠಾಣೆಯ ಪೊಲಿಸ್ ಅಧಿಕಾರಿ. ಗ್ರೇಡ್ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಆಗಿದ್ದ ಗೋಪಕುಮಾರ್ ನನ್ನು ಶನಿವಾರ ಅಮಾನತು ಮಾಡಿ, ತನಿಖೆಗೆ ಆದೇಶ ಹೊರಡಿಸಲಾಗಿದೆ.
ನಡೆದಿದ್ದೇನು.?:
ತಿರುವನಂತಪುರಂ ನಿವಾಸಿ ಸುದೇವನ್ ಅವರ ಪುತ್ರಿಯೊಬ್ಬಳು ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ನವೆಂಬರ್ 24ರಂದು ಮತ್ತೊಬ್ಬ ಮಗಳ ಜೊತೆ ದೂರು ನೀಡಲು ಠಾಣೆಗೆ ಬಂದಿದ್ದರು. ಈ ವೇಳೆ ನಾಪತ್ತೆ ಪ್ರಕರಣ ದಾಖಲಿಸಿಕೊಳ್ಳಲು ಎಸ್ಐ ಹಿಂದೇಟು ಹಾಕಿದ್ದಾರೆ. ಈ ಸಂಬಂಧ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಗಲಾಟೆ ತಾರಕಕ್ಕೇರಿ ಅಧಿಕಾರಿ ಸುದೇವನ್ ಮಗಳ ಜೊತೆ ಅಸಭ್ಯವಾಗಿ ವರ್ತೀಸಿದ್ದಾನೆ. ಇದನ್ನು ಸುದೇವನ್ ಅವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.
ಪೊಲೀಸ್ ಠಾಣೆ ಮುಂಭಾಗ ನಿಂತಿದ್ದ ತಂದೆ-ಮಗಳ ಜೊತೆ ಪೊಲೀಸ್ ಅಧಿಕಾರಿ ಅಸಭ್ಯವಾಗಿ ವರ್ತಿಸಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೆ ಪೊಲೀಸರೇ ಈ ರೀತಿ ಬೆದರಿಸಿದರೆ ದೂರು ನೀಡಲು ಯಾರು ಬರುತ್ತಾರೆ ಎಂದು ಸುದೇವನ್ ಅವರು ಸಹಾಯಕರಾಗಿ ಮಾತನಾಡಿದ್ದಾರೆ. ಆಗ ದುರಹಂಕಾರದ ಮಾತುಗಳನ್ನಾಡಿದ ಎಸ್ಐ, ಸುದೇವನ್ ಮಗಳ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದಾನೆ. ಕೊನೆಗೆ ಮಗಳು ಇಲ್ಲಿಂದ ಹೊರಡೋಣ ಎಂದು ಹೇಳಿ ಕಣ್ಣೀರಾಕಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಇದೀಗ ಎಸ್ಐನನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಆತನ ವಿರುದ್ಧ ತನಿಖೆ ನಡೆಸುವಂತೆ ಆದೇಶ ಹೊರಡಿಸಲಾಗಿದೆ.