ಬೆಂಗಳೂರು: ಸಿಡಿ ಪ್ರಕರಣದ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಹೇಳಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಡಿಕೆಶಿಯವರಿಗೆ ಕರೆ ಮಾಡಿ ವಿಚಾರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಡಿ.ಕೆ.ಶಿವಕುಮಾರ್ ಗೆ ಕರೆ ಮಾಡಿ ಸಿಡಿ ಪ್ರಕರಣದಲ್ಲಿ ನಿಮ್ಮ ಪಾತ್ರ ಇದೆಯೇ ಎಂದು ವಿಚಾರಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಡಿಕೆಶಿ, ಪಕ್ಷ ಉಳಿಸುವ ನಿಟ್ಟಿನಲ್ಲಿ ರಮೇಶ್ ಜಾರಕಿಹೊಳಿಯವರನ್ನು ಟ್ರ್ಯಾಕ್ ಮಾಡುತ್ತಿದ್ದೆ. ಆದರೆ ಟ್ರ್ಯಾಪ್ ಮಾಡಿದ್ದು ನಾನಲ್ಲ. ಸಿಡಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಕೆ.ಸಿ.ವೇಣುಗೋಪಾಲ್ ಅವರಿಗೆ ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ನ 5 ಶಾಸಕರನ್ನು ರಾಜೀನಾಮೆ ಕೊಡಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಪಕ್ಷ, ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲು ಅದು ಅನಿವಾರ್ಯವಾಗಿತ್ತು. ಹೀಗಾಗಿ ಟ್ರ್ಯಾಕ್ ಮಾಡಿದ್ದೆ ಎಂದು ಕರೆ ಮಾಡಿ ಸ್ಪಷ್ಟನೆ ಕೇಳಿದ ವೇಣುಗೋಪಾಲ್ ಅವರಿಗೆ ಡಿಕೆಶಿ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಮೇಶ್ ಜಾರಕಿಹೊಳಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಡಿ.ಕೆ.ಶಿವಕುಮಾರ್, ಆ ಯುವತಿ ನನ್ನ ಭೇಟಿಗೆ ಪ್ರಯತ್ನ ಮಾಡಿರಬಹುದು. ಆದರೆ ನಾನು ಯುವತಿಯನ್ನು ಭೇಟಿ ಮಾಡಿಲ್ಲ. ಯಾರಾದರೂ ರಕ್ಷಣೆ ಕೋರಿ ಬಂದರೆ ಅವರಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ. ನೆರವು ಕೇಳಿದರೆ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ನಮ್ಮ ಪಕ್ಷದ ಐವರು ಶಾಸಕರನ್ನು ಆಪರೇಷನ್ ಮಾಡೋದಾಗಿ ಹೇಳಿದ್ದರಿಂದ ಅವರನ್ನು ಟ್ರ್ಯಾಕ್ ಮಾಡಿದ್ದು ನಿಜ ಎಂಬುದನ್ನು ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಇದೇ ವೇಳೆ ನರೇಶ್ ಗೌಡ ಮಾಧ್ಯಮರಂಗದಲ್ಲಿರುವ ಕಾರಣ ನನಗೆ ಪರಿಚಯ ಇದ್ದಾನೆ. ನನಗೆ ಬೇಕಾದ ಹುಡುಗ, ನಾನು ನರೇಶ್ ಮನೆಗೆ, ಅವರ ಮನೆಯ ಕಾರ್ಯಕ್ರಮಗಳಿಗೂ ಹೋಗಿ ಬಂದಿದ್ದೇನೆ. ರಮೇಶ್ ಜಾರಕಿಹೊಳಿಗೆ ನನ್ನ ಬಗ್ಗೆ ಇಷ್ಟು ಅನುಕಂಪ ಇರುವುದು ಒಳ್ಳೆಯದೆ ಎಂದಿದ್ದಾರೆ.
ರಾಜೀನಾಮೆ ಕೊಡುವ ವಿಚಾರ ಪ್ರಸ್ತಾಪಿಸಿದಾಗ, ಹೌದಾ, ಅದರ ಅರ್ಥ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ರಾಜೀನಾಮೆ ನೀಡಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.