– ವಿಶೇಷ ಪೂಜೆ, ಹೋಮ ಮಾಡಿ ದೇವಸ್ಥಾನ ಬಾಗಿಲು ಬಂದ್
ಬೆಂಗಳೂರು: ಇಂದು ಚೂಡಾಮಣಿ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರಿನ ಬಹುತೇಕ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮವನ್ನು ಮಾಡಿ ಬಾಗಿಲನ್ನು ಮುಚ್ಚಲಾಗಿದೆ.
ಬೆಂಗಳೂರಿನ ಪುರಾತನ ಐತಿಹಾಸಿಕ ದೇವಾಲಯವಾಗಿರೋ ಕಾಡುಮಲ್ಲೇಶ್ವರ ದೇವಾಲಯವನ್ನ ಈಗಾಗಲೇ ದರ್ಬೆಯಿಂದ ಬಂಧನ ಮಾಡಲಾಗಿದೆ. ಅರ್ಚಕರು ಶಿವನಿಗೆ ವಿಶೇಷವಾಗಿ ಪಂಚಾಮೃತ ಅಭಿಷೇಕ ಮಾಡಿ, ರುದ್ರಪಠಣದ ಮೂಲಕ ದೇವರ ಪ್ರಾರ್ಥನೆ ಮಾಡಿದ್ದಾರೆ. ನಂತರ ಅರ್ಚಕರು ಮಹಾಮಂಗಳಾರತಿ ಮಾಡಿ ದರ್ಬೆಯಿಂದ ಬಂಧನ ಮಾಡಿದ್ದು, ದೇವಾಲಯದ ಬಾಗಿಲನ್ನ ಮುಚ್ಚಿದ್ದಾರೆ.
ಗ್ರಹಣ ಮೋಕ್ಷವಾದ ಬಳಿಕ ಮಧ್ಯಾಹ್ನ 1:35ರ ನಂತರ ದೇವಾಲಯದಲ್ಲಿ ಶುದ್ಧಿ ಕಾರ್ಯ ಮಾಡಲಾಗುತ್ತೆ. ಶಿವ ಅಭಿಷೇಕ ಪ್ರಿಯನಾಗಿರೋದ್ರಿಂದ ಮತ್ತೆ ರುದ್ರಾಭಿಕೇಷ ಮತ್ತು ಪಂಚಾಮೃತ ಅಭಿಷೇಕ ಮಾಡಲಾಗುತ್ತಿದೆ. ಸಂಜೆ 4 ಗಂಟೆಯ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ದೇವಾಲಯಕ್ಕೆ ಬರುವ ಪ್ರತಿಯೊಬ್ಬರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತೆ. ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಮತ್ತು ಸೈನಿಟೈಸರ್ ಬಳಕೆ ಕಡ್ಡಾಯವಾಗಿದೆ. ದೇವರ ದರ್ಶನಕ್ಕೆ ಮಾತ್ರ ಇರುತ್ತೆ, ಯಾವುದೇ ಹೋಮ ಹವನ ಮಾಡುವಂತಿಲ್ಲ. ಅಲ್ಲದೇ ಭಕ್ತರಿಗೆ ತೀರ್ಥ ಪ್ರಸಾದವೂ ಸಹ ಇರುವುದಿಲ್ಲ.
ನಗರದ ಅಣ್ಣಮ್ಮ ದೇವಿಗೆ ವಿಶೇಷ ಪೂಜೆ ಮಾಡಿ ದರ್ಬೆ ಅರ್ಪಣೆ ಮಾಡಿದ್ದಾರೆ. ದರ್ಪಣೆ ಮಾಡಿದ ಬಳಿಕ ದೇವಸ್ಥಾನದ ಮುಖ್ಯ ದ್ವಾರಕ್ಕೆ ದೊಡ್ಡ ಕಬ್ಬಿಣದ ಗೇಟ್ಗಳನ್ನು ಕಟ್ಟಿ ಕ್ಲೋಸ್ ಮಾಡಿದ್ದಾರೆ. ಗ್ರಹಣ ಮುಗಿಯುವವರೆಗೂ ಓಪನ್ ಆಗಲ್ಲ. ಮತ್ತೆ ಸಂಜೆ 4 ಗಂಟೆಗೆ ದೇವಸ್ಥಾನ ಓಪನ್ ಮಾಡಿ ಪೂಜೆ ಪುರಸ್ಕಾರ ಮಾಡಲಾಗುತ್ತದೆ.
ಇನ್ನೂ ದೊಡ್ಡ ಗಣಪತಿ ದೇವಾಲಯದಲ್ಲಿ ದರ್ಬೆ ಹಾಕಿ, ಅಭಿಷೇಕ, ಮಹಾಮಂಗಳಾರತಿ ಮಾಡಿ ಬಾಗಿಲು ಬಂದ್ ಮಾಡಲಾಗುತ್ತಿದೆ. ಭಕ್ತಾಧಿಗಳಿಗೆ ಮಾತ್ರ ಪ್ರವೇಶವಿಲ್ಲ. ಹೀಗಾಗಿ ಹೊರಗಡೆಯಿಂದಲೇ ಭಕ್ತರು ನಮಸ್ಕರಿಸುತ್ತಿದ್ದಾರೆ. ಅಭಿಷೇಕದ ನಂತರ ದೇವಾಲಯ ಬಂದ್ ಮಾಡಲಾಗುತ್ತದೆ. ಗ್ರಹಣ ಮುಗಿದ ನಂತರ ಸಂಜೆ 4.30ಕ್ಕೆ ದೊಡ್ಡ ಗಣಪತಿ ದೇವಸ್ಥಾನ ಓಪನ್ ಆಗುತ್ತೆ. ಬಳಿಕ 5.30ಕ್ಕೆ ಗ್ರಹಣ ಶಾಂತಿ ಅಭಿಷೇಕ ನಡೆಯುತ್ತೆ. ಮತ್ತೆ ಸಂಜೆ 7.30ಕ್ಕೆ ಮತ್ತೆ ದೇವಸ್ಥಾನ ಮುಚ್ಚಲಾಗುತ್ತದೆ.
ಗವಿಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಹೋಮ, ಆದಿತ್ಯಾಧಿ ನವಗ್ರಹ ಹೋಮ ಪೂಜೆ ಮಾಡಲಾಗುತ್ತಿದೆ. ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೂ ಹೋಮ ಮಾಡಲಾಗುತ್ತಿದ್ದು, ಹೋಮ ಮುಗಿದ ಮೇಲೆ ದರ್ಬೆ ಹಾಕಿ ದೇವಾಲಯ ಬಂದ್ ಮಾಡಲಾಗುತ್ತದೆ. ಮದ್ಯಾಹ್ನ 1:40ಕ್ಕೆ ಗ್ರಹಣ ಸಮಾಪ್ತಿ ನಂತರ ದೇವಾಲಯ ಮತ್ತೆ ಓಪನ್ ಆಗುತ್ತದೆ. ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆವರೆಗೂ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಕೆ ಮಾಡುವುದು ಕಡ್ಡಾಯವಾಗಿದೆ.