ರಾಮನಗರ: ಟೈರ್ ಸಂಗ್ರಹ ಮಾಡಿದ್ದ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ರಾಮನಗರದ ಯಾರಬ್ ನಗರದ ಹುಣಸನಹಳ್ಳಿ ರಸ್ತೆಯಲ್ಲಿರುವ ಗೋದಾಮಿನಲ್ಲಿ ನಡೆದಿದೆ.
ಬೆಳಗ್ಗೆ ಇದ್ದಕ್ಕಿದ್ದಂತೆ ಅಗ್ನಿ ಅವಘಡ ಸಂಭವಿಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಅಕ್ರಂ ಷರಿಫ್ ಎಂಬವರಿಗೆ ಸೇರಿದ ಹಳೆಟೈರ್ ಸಂಗ್ರಹ ಗೊಡಾನ್ ಇದಾಗಿದ್ದು, ಬೆಂಕಿಯ ನರ್ತನಕ್ಕೆ ಟೈರ್ ಗಳು ಹೊತ್ತಿ ಉರಿದಿವೆ.
ಗೊಡಾನ್ ಅಕ್ಕಪಕ್ಕದಲ್ಲಿ ಜನರು ವಾಸಮಾಡುವ ಮನೆಗಳಿಲ್ಲದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. 30 ನಿಮಿಷಗಳ ಬಳಿಕ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ. ನೂರಾರು ಟಯರ್ ಗಳು ಏಕಕಾಲದಲ್ಲಿ ಹೊತ್ತಿ ಉರಿದ ಹಿನ್ನೆಲೆಯಲ್ಲಿ ಅಗ್ನಿ ಅವಘಡಕ್ಕೆ ನಿಖರವಾದ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.
ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ರಾಮನಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.