– ಕೊರೊನಾ ಮಾರ್ಗಸೂಚಿ ಪಾಲಿಸಿ ಕುಂಭಮೇಳ
– ಕುಂಭಮೇಳ, ಮರ್ಕಜ್ ನಡುವಿನ ಹೋಲಿಕೆ ತಪ್ಪು
ಡೆಹ್ರಾಡೂನ್: ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು, ನಿಜಾಮುದ್ದೀನ್ ಮರ್ಕಜ್ನೊಂದಿಗೆ ಹೋಲಿಕೆ ಮಾಡಬೇಡಿ. ಕುಂಭಮೇಳದಲ್ಲಿ ಗಂಗಾಸ್ಥಾನ ಮಾಡಿದರೆ ಕೊರೊನಾ ಬರುವುದಿಲ್ಲ ಎಂದು ಉತ್ತರಾಖಂಡ ಮುಖ್ಯಮಂತ್ರಿ ತೀರ್ಥ್ ಸಿಂಗ್ ರಾವತ್ ಹೇಳಿಕೆ ನೀಡಿದ್ದಾರೆ.
ಉತ್ತರಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಮತ್ತು ನಿಜಾಮುದ್ದೀನ್ ಮರ್ಕಜ್ ಕುರಿತು ಸ್ಥಳೀಯ ಮಾಧ್ಯಮವೊಂದರ ಪ್ರಶ್ನೆಗೆ ಉತ್ತರಿಸಿದ ತೀರ್ಥ್ ಸಿಂಗ್ ರಾವತ್ ಅವರು, ಕುಂಭಮೇಳ ಮತ್ತು ನಿಜಾಮುದ್ದೀನ್ ಮರ್ಕಜ್ ಎರಡು ಧಾರ್ಮಿಕ ಕಾರ್ಯಕ್ರಮಗಳನ್ನು ಹೋಲಿಕೆ ಮಾಡಬೇಡಿ. ನಿಜಾಮುದ್ದೀನ್ ಮರ್ಕಜ್ ಕಟ್ಟಡದಲ್ಲಿ ನಡೆದರೆ ಕುಂಭಮೇಳ ತೆರೆದ ಜಾಗದಲ್ಲಿ ನಡೆಯುತ್ತದೆ. ಅದಲ್ಲದೆ ನಿಜಾಮುದ್ದೀನ್ ಮರ್ಕಜ್ ಕಾರ್ಯಕ್ರಮಕ್ಕೆ ವಿದೇಶಿಗರು ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕುಂಭಮೇಳದಲ್ಲಿ ಹೊರಗಿನಿಂದ ಯಾರು ಬರುವುದಿಲ್ಲ ಎಲ್ಲರು ನಮ್ಮವರೆ ಆಗಿರುತ್ತಾರೆ. ಆದರೆ ನಿಜಾಮುದ್ದೀನ್ ಮರ್ಕಜ್ಗೆ ಬೇರೆ ದೇಶಗಳಿಂದ ಜನ ಬರುತ್ತಾರೆ. ಮರ್ಕಜ್ ನಡೆದಾಗ ಕೊರೊನಾ ಕುರಿತು ಹೆಚ್ಚಿನ ಅರಿವು ಇರಲಿಲ್ಲ ಮತ್ತು ಮಾರ್ಗಸೂಚಿಗಳಿರಲಿಲ್ಲ. ಇದರೊಂದಿಗೆ ಮರ್ಕಜ್ಗೆ ಆಗಮಿಸಿದವರು ಯಾರು ಎಷ್ಟು ದಿನ ಉಳಿದುಕೊಳ್ಳಲಿದ್ದಾರೆ ಮತ್ತು ಒಟ್ಟು ಜನಸಂಖ್ಯೆಯ ಸರಿಯಾದ ಯೋಜನೆ ಇರಲಿಲ್ಲ ಎಂದಿದ್ದಾರೆ.
ಆದರೆ ಪ್ರಸ್ತುತ ಕೊರೊನಾ ಕುರಿತು ಹೆಚ್ಚಿನ ಅರಿವು ಮೂಡಿದ್ದು, ಸರಿಯಾದ ಮಾರ್ಗಸೂಚಿಗಳನ್ನು ತೆಗೆದುಕೊಂಡು ಕುಂಭಮೇಳ ನಡೆಸಲಾಗುತ್ತಿದೆ. ಕುಂಭಮೇಳ 12 ವರ್ಷಗಳಿಗೊಮ್ಮೆ ಬರುತ್ತದೆ. ಹಾಗೆ ಕುಂಭಮೇಳ ಲಕ್ಷಾಂತರ ಜನರ ನಂಬಿಕೆ ಮತ್ತು ಭಾವನೆಗಳೊಂದಿಗೆ ನಂಬಿಕೆ ಹೊಂದಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ಕುಂಭಮೇಳಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಕುಂಭಮೇಳವನ್ನು ಯಶಸ್ವಿಯಾಗಿ ನಡೆಸಲು ಕೋವಿಡ್-19ನ ಸವಾಲು ಮುಂದಿದೆ. ಈ ಕುರಿತು ಹೆಚ್ಚಿನ ಗಮನ ಹರಿಸಿ ಜನರ ಆರೋಗ್ಯ ದೃಷ್ಟಿಯಿಂದ ಸರಿಯಾದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡು ಕುಂಭಮೇಳ ನಡೆಸುವುದಾಗಿ ತಿಳಿಸಿದ್ದಾರೆ.