ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡದಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಕ್ವಾರಂಟೈನ್ ಆಗಿರುವ ಸೋಂಕಿತರ ಗೋಳು ಕೇಳೋರೆ ಇಲ್ಲ ಎನ್ನುವಂತಾಗಿದೆ.
ಕೇರ್ ಸೆಂಟರ್ ನಲ್ಲಿ 40 ಜನರಿಗೆ ಮೂರು ಬಾತ್ ರೂಮ್, ಶೌಚಾಲಯಗಳಿವೆ. ಜೊತೆಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಸ್ನಾನಕ್ಕೆ ಕೇವಲ ನಾಲ್ಕು ಬಕೆಟ್ ಗಳು ಮಾತ್ರ ನೀಡಲಾಗಿದೆ. ಹಾಗಾಗಿ ಸೋಂಕಿತರು ಶೌಚಾಲಯ ಹಾಗೂ ಸ್ನಾನಕ್ಕಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಮಕ್ಕಳಿಗೆ ಹಾಲು ವಿತರಣೆ ಮಾಡದ ಹಿನ್ನೆಲೆ ಕಂದಮ್ಮಗಳ ಆಕ್ರಂದನ ಹೆತ್ತವರ ನಿದ್ದೆಗೆಡಿಸಿದೆ.
ಮತ್ತೊಂದೆಡೆ ಕೋವಿಡ್ ಸೋಂಕಿತರು ಬಳಸಿದ ಬೆಡ್ ಸ್ಯಾನಿಟೈಸ್ ಮಾಡುತ್ತಿಲ್ಲ. ನಂತರ ಬರುವ ಸೋಂಕಿತರಿಗೆ ಅದೇ ಬೆಡ್ ನೀಡಲಾಗುತ್ತಿದೆ. ಸಮರ್ಪಕ ಊಟ ಸಿಗುತ್ತಿಲ್ಲ ಎಂದು ಕ್ವಾರಂಟೈನ್ ಆಗಿರುವ ಸೋಂಕಿತರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಲ್ಲದೆ ನಮ್ಮನ್ನು ಮನೆಗೆ ಕಳುಹಿಸಿ. ನಾವು ಅಲ್ಲೇ ಕ್ವಾರಂಟೈನ್ ಆಗುತ್ತೇವೆ ಎಂದು ಹೇಳುತ್ತಿದ್ದಾರೆ.