– ಮೈಸೂರು, ಕೊಳ್ಳೆಗಾಲ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹ
ಚಾಮರಾಜನಗರ: ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಬೆನ್ನಲ್ಲೆ ಆಯುಷ್ಯ ಇಲಾಖೆಯಿಂದ ಮತ್ತೊಂದು ಕೊಡುಗೆ ನೀಡಲಾಗುತ್ತಿದೆ. ಇತ್ತ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಚ್ಯವನ್ ಪ್ರಾಶ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ 40 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದರ ಪ್ರಯೋಜನ ಪಡೆಯಲಿದ್ದಾರೆ. ಆಯುಷ್ಯ ಇಲಾಖೆಯಿಂದ ಚ್ಯವನ್ ಪ್ರಾಶ್ ಖರೀದಿಸಿ ಈಗಾಗಲೇ ಎಲ್ಲಾ ಜಿಲ್ಲೆಗಳಿಗು ಸರಬರಾಜು ಮಾಡಲಾಗಿದ್ದು, ಶೀಘ್ರದಲ್ಲೇ ಆಶಾ ಕಾರ್ಯಕರ್ತೆಯರಿಗೆ ವಿತರಣೆ ಆಗಲಿದೆ. ಗಡಿ ಜಿಲ್ಲೆ ಚಾಮರಾಜನಗರಕ್ಕೂ ಚ್ಯವನ್ ಪ್ರಾಶ್ ಸರಬರಾಜು ಮಾಡಲಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಸದ್ಯದಲ್ಲೇ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಆಯುಷ್ಯ ಅಧಿಕಾರಿ ಡಾ.ರಾಚಯ್ಯ ತಿಳಿಸಿದ್ದಾರೆ.
ಇತ್ತ ಮೈಸೂರು ಜಿಲ್ಲೆ ಕೊರೊನಾ ಮುಕ್ತವಾದ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಮೈಸೂರು ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಚಾಮರಾಜನಗರ ಕೂಡ ಗ್ರೀನ್ ಝೋನ್ನಲ್ಲಿದೆ, ಇದೀಗ ಮೈಸೂರು ಕೂಡ ಕೊರೊನಾ ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೊಳ್ಳೆಗಾಲದ ಬಹುತೇಕ ವ್ಯವಹಾರ, ವ್ಯಾಪಾರ, ವಹಿವಾಟು ಮೈಸೂರನ್ನು ಅವಲಂಬಿಸಿದೆ. ಇದರಿಂದ ಮೈಸೂರು ಹಾಗೂ ಕೊಳ್ಳೆಗಾಲ ನಡುವಿನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಸಂಚಾರದ ಕುರಿತು ಸಚಿವ ಸುರೇಶ್ ಕುಮಾರ್ ಜೊತೆ ಮಾತನಾಡಿದ್ದೇನೆ. ಅವರು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಜೊತೆ ಚರ್ಚೆ ನಡೆಸಿ ಸಂಚಾರ ವ್ಯವಸ್ಥೆ ಕಲ್ಪಿಸುವ ಕುರಿತು ಮಾತನಾಡ್ತೀನಿ ಎಂದು ಹೇಳಿದ್ದಾರೆ. ಕೊಳ್ಳೆಗಾಲ ಹಾಗೂ ಮೈಸೂರು ಸಂಚಾರ ಆರಂಭವಾಗಲೇ ಬೇಕು, ಯಾಕಂದ್ರೆ ಬಹುತೇಕ ಜನರು ಮೈಸೂರಿನಿಂದ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿಕೊಂಡು ಕೊಳ್ಳೆಗಾಲಕ್ಕೆ ಬಂದು ಮಾರಾಟ ಮಾಡ್ತಾರೆ. ಇದರಿಂದ ಕೂಡಲೇ ಇತ್ತ ಸಚಿವರು ಗಮನಹರಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಶಾಸಕರು ಆಗ್ರಹಿಸಿದ್ದಾರೆ.