ಬೆಂಗಳೂರು: ಸದಾ ಒಂದಿಲ್ಲೊಂದು ನೆಗೆಟಿವ್ ಸುದ್ದಿಯಲ್ಲಿರುತ್ತಿದ್ದ ಸೆಂಟ್ರಲ್ ಜೈಲಿನಲ್ಲೀಗ ಪಾಸಿಟಿವ್ ಸುದ್ದಿಯೊಂದು ವರದಿಯಾಗಿದೆ. ಗಾಂಜಾ, ಚಾಕು ಚೂರಿ ಹೊಡೆದಾಟ ಅಂತಿದ್ದ ಜೈಲಿನಲ್ಲೀಗ ಧ್ಯಾನ, ಯೋಗದ ತರಬೇತಿ ಶುರುವಾಗಿದೆ.
ಹೌದು. ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಯೋಗ, ಧ್ಯಾನ ತರಬೇತಿಯನ್ನ ನೀಡಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಮಾನಸಿಕ ಖಿನ್ನತೆಗೆ ಕೈದಿಗಳು ಒಳಗಾಗಿದ್ದಾರೆ. ನಿಮ್ಹಾನ್ಸ್ ಆಸ್ಪತ್ರೆಯ ತಜ್ಞರು ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿ ಕೈದಿಗಳು ಖಿನ್ನತೆಗೆ ಒಳಗಾಗುತ್ತಿರೋ ಅಂಶ ಬೆಳಕಿಗೆ ಬಂದಿತ್ತು.
ಕೊರೊನಾದಿಂದ ಮನೆಯವರು ಬಾರದೆ ಕೈದಿಗಳು ಮಾನಸಿಕವಾಗಿ ನೊಂದಿದ್ರು. ಈ ಹಿನ್ನಲೆಯಲ್ಲಿ ಅವರನ್ನು ಇದರಿಂದ ಹೊರ ತರಬೇಕಾದ್ರೆ ಯೋಗ, ಧ್ಯಾನ ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ ಮೊದಲು ಜೈಲು ಸಿಬ್ಬಂದಿಗೆ ಯೋಗ, ಧ್ಯಾನದ ತರಬೇತಿ ನೀಡಲಾಗಿತ್ತು. ಕೈದಿಗಳ ಮನಪರಿವರ್ತನೆಗೆ ಸಿಬ್ಬಂದಿಗೆ ರವಿ ಶಂಕರ್ ಗುರೂಜಿ ಆಶ್ರಮದಿಂದ ತರಬೇತಿ ನೀಡಲಾಗಿತ್ತು.
ಈಗ ಜೈಲಿನ ಸಿಬ್ಬಂದಿಯಿಂದ ಕೈದಿಗಳಿಗೆ ಯೋಗ, ಧ್ಯಾನದ ಬಗ್ಗೆ ಟ್ರೈನಿಂಗ್ ಶುರುವಾಗಿದೆ. ಸೂರ್ಯ ನಮಸ್ಕಾರ, ಯೋಗ, ಧ್ಯಾನ, ಗೂರೂಜಿ ಪುಸ್ತಕಗಳ ಬಗ್ಗೆ ಪ್ರವಚನ ಕೂಡ ಮಾಡಲಾಗ್ತಿದೆ. ಕೇವಲ ಯೋಗ ಅಷ್ಟೇ ಅಲ್ಲದೇ ಕೈದಿಗಳ ಮನಪರಿವರ್ತನೆಗೆ ಅಧಿಕಾರಿಗಳಿಂದ ವಿಶೇಷ ತರಗತಿಯನ್ನ ನೀಡಲಾಗ್ತಿದ್ದು, ಪ್ರತಿ ನಿತ್ಯ 6.30 ರಿಂದ 8.30 ರವರೆಗೂ ಅವರಿಗೆ ಯೋಗ ತರಬೇತಿಯನ್ನ ನೀಡಲಾಗುತ್ತಿದೆ. ಒಂದು ವೇಳೆ ಸಿಬ್ಬಂದಿಯ ನಿರ್ಲಕ್ಷ್ಯ ಕಂಡು ಬಂದ್ರೆ ಶಿಸ್ತುಕ್ರಮದ ಎಚ್ಚರಿಕೆ ಕೂಡ ನೀಡಲಾಗಿದೆ.