ಹಾಸನ: ಕೊರೊನಾ ಎರಡನೇ ಅಲೆಯಿಂದ ಜನ ಆಘಾತಕ್ಕೊಳಗಾಗಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಜಿಲ್ಲೆಯಲ್ಲಿ ಸಹ ಪ್ರತಿ ದಿನ ಮುನ್ನೂರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಇದರ ಮಧ್ಯೆ ಎಣ್ಣೆ ಅಂಗಡಿಗಾಗಿ ಪುರುಷರು ಹೊರಾಟಕ್ಕಿಳಿದಿದ್ದು, ಇದನ್ನು ವಿರೋಧಿಸಿ ಮಹಿಳೆಯರು ಬೀದಿಗಿಳಿದಿದ್ದಾರೆ.
ಎಣ್ಣೆ ಬೇಕು ಎಂಬ ಬ್ಯಾನರ್ ಹಿಡಿದು ಗಾಡೇನಹಳ್ಳಿ, ಹಲಸಿನಹಳ್ಳಿ ಸುತ್ತಮುತ್ತಲ ಪುರುಷರು ಡಿಸಿ ಕಚೇರಿ ಎದುರು ಹೋರಾಟಕ್ಕೆ ಕುಳಿತಿದ್ದಾರೆ. ಒಂದು ದಿನದ ಹಿಂದಷ್ಟೇ ಈ ಭಾಗದ ಒಂದಷ್ಟು ಜನ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ನಮ್ಮ ಗ್ರಾಮದ ಸಮೀಪ ಎಣ್ಣೆ ಅಂಗಡಿ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಇದರಿಂದ ನಮ್ಮ ಮನೆಗಳಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ರಸ್ತೆಯಲ್ಲಿ ಹೆಣ್ಣುಮಕ್ಕಳು ನೆಮ್ಮದಿಯಾಗಿ ಓಡಾಡಲು ಆಗಲ್ಲ, ಹೀಗಾಗಿ ಎಣ್ಣೆ ಅಂಗಡಿ ಬೇಡವೇ ಬೇಡ ಎಂದು ಹೋರಾಟಕ್ಕಿಳಿದಿದ್ದರು. ಅಷ್ಟೇ ಅಲ್ಲದೆ ಈ ಬಗ್ಗೆ ಡಿಸಿಗೆ ಮನವಿ ಕೂಡ ಸಲ್ಲಿಸಿದ್ದರು. ಇತ್ತ ಮಹಿಳಾಮಣಿಯರ ಹೋರಾಟಕ್ಕೆ ಪುರುಷರು ತಿರುಗೇಟು ನೀಡಲು ಪ್ರತಿ ಹೋರಾಟ ರೂಪಿಸಿದ್ದಾರೆ.
ಮಹಿಳೆಯರ ಹೋರಾಟಕ್ಕೆ ಪ್ರತಿಯಾಗಿ ಗಾಡೇನಹಳ್ಳಿ ಸಮೀಪದ ಗ್ರಾಮಗಳ ಪುರುಷರು ಎಣ್ಣೆಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಎಣ್ಣೆ ಬೇಕು ಅಂದ್ರೆ 12 ಕಿಲೋಮೀಟರ್ ದೂರವಿರುವ ದುದ್ದ ಅಥವಾ ಏಳು ಕಿಲೋಮೀಟರ್ ದೂರವಿರುವ ಶಾಂತಿಗ್ರಾಮಕ್ಕೆ ಹೋಗಬೇಕು. ಎಣ್ಣೆ ಕುಡಿಯಲು ದೂರ ಹೋಗಲು ಹೆಚ್ಚು ಹಣ ಖರ್ಚಾಗುತ್ತೆ. ಅಷ್ಟೇ ಅಲ್ಲದೆ ಹಲವು ದಿನಗಳಿಂದ ಈ ಭಾಗದಲ್ಲಿ ಅಕ್ರಮವಾಗಿ ಹೆಚ್ಚು ಬೆಲೆಗೆ ಮದ್ಯ ಮಾರುತ್ತಿದೆ. ಇಲ್ಲಿ ಒಂದು ಮದ್ಯದಂಗಡಿ ಆದರೆ ಇದಕ್ಕೆಲ್ಲ ಕಡಿವಾಣ ಬೀಳಲಿದೆ ಎಂದು ಪುರುಷರು ಹೋರಾಟಕ್ಕಿಳಿದಿದ್ದಾರೆ.
ಎಲ್ಲ ಕಡೆ ಕೊರೊನಾ ಸದ್ದು ಮಾಡುತ್ತಿದ್ದರೆ, ಇಲ್ಲಿ ಮಾತ್ರ ಒಂದು ಎಣ್ಣೆ ಅಂಗಡಿ ತೆರೆಯುವ ವಿಚಾರಕ್ಕೆ ಒಂದೇ ಗ್ರಾಮದ ಮಹಿಳೆಯರು ಮತ್ತು ಪುರುಷರ ನಡುವೆ ಹೋರಾಟ ನಡೆಯುತ್ತಿದೆ.