ಉಡುಪಿ: ಶ್ರೀಕೃಷ್ಣ ಮಠದಲ್ಲಿ ಇದ್ದ ಕನ್ನಡ ಬೋರ್ಡ್ ಬದಲಿಗೆ ತುಳು ಹಾಗೂ ಸಂಸ್ಕೃತ ಬೋರ್ಡ್ ಅಳವಡಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಉಡುಪಿ ಕೃಷ್ಣಮಠದ ಮಹಾದ್ವಾರಕ್ಕೆ ಕನ್ನಡದ ನಾಮಫಲಕವನ್ನು ಅಳವಡಿಸಲಾಗಿದೆ.
ಉಡುಪಿ ಕೃಷ್ಣ ಮಠದ ಪೂಜಾ ಅಧಿಕಾರ ಪರ್ಯಾಯ ಅದಮಾರು ಮಠದ ಕೈಯಲ್ಲಿದೆ ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ಸಂಪೂರ್ಣವಾಗಿ ಮಠವನ್ನು ಪುನಶ್ಚೇತನ ಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಹಳೆಯ ಬೋರ್ಡ್ ತೆಗೆದು, ಹೊಸ ಬೋರ್ಡ್ ಅಳವಡಿಸಲಾಗಿತ್ತು. ಆದರೆ ಹೊಸ ಬೋರ್ಡ್ ನಲ್ಲಿ ಕನ್ನಡ ಮಾಯವಾಗಿ ತುಳು ಮತ್ತು ಸಂಸ್ಕೃತ ಪ್ರತ್ಯಕ್ಷವಾಗಿತ್ತು. ಇದು ಕೃಷ್ಣ ಮಠದ ಭಕ್ತರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ನೋವುಂಟು ಮಾಡಿತ್ತು.
ಇದೀಗ ಕೃಷ್ಣಮಠದ ಮಹಾದ್ವಾರಕ್ಕೆ ಕನ್ನಡದ ನಾಮಫಲಕ ಅಳವಡಿಕೆ ಆಗಿದೆ. ಕೃಷ್ಣ ಮಠ ಮತ್ತು ಅದಮಾರು ಮಠದ ಸಿಬ್ಬಂದಿ ಹೊಸ ನಾಮಫಲಕವನ್ನು ಹಾಕಿದ್ದಾರೆ. ‘ವಿಶ್ವಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಸಂಸ್ಥಾನ ಶ್ರೀ ಕೃಷ್ಣ ಮಠ ಉಡುಪಿ’ ಎಂದು ಬರೆದಿರುವ ಬೋರ್ಡನ್ನು ಅಳವಡಿಸಲಾಗಿದೆ.
ಲಕ್ಷದೀಪೋತ್ಸವ ಸಂದರ್ಭ ಕನ್ನಡದ ಬೋರ್ಡ್ ಸಿದ್ಧವಾಗಿರಲಿಲ್ಲ. ಮೊದಲು ರೆಡಿಯಾಗಿದ್ದ ಸಂಸ್ಕೃತ ಮತ್ತು ತುಳುವಿನ ಬೋರ್ಡನ್ನು ಅಳವಡಿಸಿದ್ದೆವು. ಬೋರ್ಡ್ ರಚನೆ ಕಾರ್ಯ ಈಗ ಸಂಪೂರ್ಣವಾಗಿದೆ. ಇದೀಗ ಕನ್ನಡದಲ್ಲಿ ಬರೆದಿರುವ ಬೋರ್ಡ್ ರೆಡಿಯಾಗಿದ್ದು, ಅದನ್ನು ಅಳವಡಿಸುವ ಪ್ರಕ್ರಿಯೆ ನಡೆಸಿದ್ದೇವೆ. ಯಾರಿಗೂ ನೋವು ಮಾಡುವ, ಕನ್ನಡಕ್ಕೆ ಅಗೌರವ ತೋರುವ ಉದ್ದೇಶ ನಮ್ಮದಲ್ಲ ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.