ಹಾವೇರಿ: 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಅಪರಾಧಿಗೆ ಹಾವೇರಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಪರಾಧಿ ಮಂಜುನಾಥಗೌಡ ಪಾಟೀಲಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದು, ಆಗಸ್ಟ್ 6, 2018 ರಂದು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ಗ್ರಾಮದಿಂದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿ, ವರದಾ ನದಿ ಬ್ರಿಡ್ಜ್ ಕೆಳಗೆ ಮೃತದೇಹ ಎಸೆದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಪರಾಧಿ ಪರಾರಿ ಆಗಿದ್ದ.
ಹಾವೇರಿ ಜಿಲ್ಲೆಯ ಜನರು ಈ ಪ್ರಕರಣದಿಂದ ಬೆಚ್ಚಿ ಬಿದ್ದಿದ್ದರು. ಕಾಲೇಜಗೆ ಹೋದ ಅಪ್ರಾಪ್ತೆ ಮಗಳು ಮನೆಗೆ ವಾಪಸ್ ಬಾರದ್ದಕ್ಕೆ ಪೋಷಕರು ತೀವ್ರ ಆತಂಕಗೊಂಡಿದ್ದರು. ಕೊಲೆಯಾಗಿ ಎರಡ್ಮೂರು ದಿನಗಳ ಬಳಿಕ ಮಗಳ ಮೃತದೇಹದ ಪತ್ತೆಯಾಗಿತ್ತು. ಬಳಿಕ ಜಿಲ್ಲೆಯ ಪೋಲಿಸರು ಅಪರಾಧಿಯನ್ನ ಪತ್ತೆ ಮಾಡಿದ್ದರು.
ಎರಡು ವರ್ಷಗಳ ಕಾಲ ನಿರಂತರವಾಗಿ ವಾದ-ವಿವಾದ ಆಲಿಸಿದ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯದೀಶರು ಈ.ರಾಜುಗೌಡ ಮರಣದಂಡನೆ ತೀರ್ಪು ಪ್ರಕಟಣೆ ಮಾಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿನಾಯಕ ಪಾಟೀಲ್ ವಾದ ಮಂಡಿಸಿದ್ದಾರೆ.