-ಮೂರು ಲಕ್ಷ ಮೌಲ್ಯದ ನಾಟ ವಶ
ಕಾರವಾರ: ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಸೇರಿ ನಾಲ್ವರು ಆರೋಪಿಗಳನ್ನು ಸೀಸ ಮತ್ತು ಸಾಗ್ವಾನಿ ತುಂಡುಗಳನ್ನು ಸಾಗಿಸುತ್ತಿರುವಾಗ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 3 ಲಕ್ಷ ಮೌಲ್ಯದ ತುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಯಲ್ಲಾಪುರ ಜೆಡಿಎಸ್ ತಾಲೂಕಾ ಘಟಕದ ಅಧ್ಯಕ್ಷ ಹಾಗೂ ಯಲ್ಲಾಪುರ ಪಟ್ಟಣ ಪಂಚಾಯತ ಮಾಜಿ ಸದಸ್ಯನಾಗಿರುವ ರವಿಚಂದ್ರ ನಾಯ್ಕ್ ಮುಖ್ಯ ಆರೋಪಿಯಾಗಿದ್ದಾನೆ. ಈತ ತನ್ನ ಸಹಚರರೊಡನೆ ಯಲ್ಲಾಪುರದ ಬೀಸಗೋಡು ವಲಯದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನಾಟ ಕಡಿದು ಸಾಗಿಸುತ್ತಿದ್ದಾಗ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಯಲ್ಲಾಪುರದ ಮಂಜುನಾಥ್ ಪಟಗಾರ, ಮಂಜುನಾಥ್ ಗೌಡ, ಹುಲಿಯಾ ಗೌಡ ಉಳಿದ ಬಂಧಿತ ಆರೋಪಿಗಳಾಗಿದ್ದು, ಇನ್ನೋರ್ವ ಆರೋಪಿ ತಿಮ್ಮಣ್ಣ ಗೌಡ ತಲೆ ಮರೆಸಿಕೊಂಡಿದ್ದಾನೆ. ಇವರಿಂದ 3 ಲಕ್ಷ ಮೊತ್ತದ ನಾಟ, ಒಂದು ಪಿಕಪ್ ವಾಹನ ಹಾಗೂ 2 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.