ಕಾರವಾರ: ಶಿರಸಿ ತಾಲೂಕಿನ ಕಾನಗೋಡು ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಅಂಧ ವ್ಯಕ್ತಿಯೊಬ್ಬರು ನಾಮಪತ್ರ ಸಲ್ಲಿಕೆ ಮಾಡಿ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದು ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.
ಕಾನಗೋಡು ಗ್ರಾಮಪಂಚಾಯ್ತಿಯ ಬಿಸಲಕೊಪ್ಪದ ರಾಘವೇಂದ್ರ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇವರ ಈ ಉತ್ಸಾಹಕ್ಕೆ ಸ್ಥಳೀಯವಾಗಿ ಬಿಜೆಪಿ ಪಕ್ಷ ಸಹ ಬೆಂಬಲ ನೀಡಿದೆ.
ಇವರು ಸ್ಪರ್ಧೆ ಮಾಡಿರುವ ಕ್ಷೇತ್ರದಲ್ಲಿ 500 ಕ್ಕೂ ಹೆಚ್ಚು ಮತದಾರರಿದ್ದಾರೆ. ಕಳೆದ ಚುನಾವಣೆಯಲ್ಲಿ ಸಹ ಸ್ಪರ್ಧಿಸಿದ್ದ ಇವರು ಕೇವಲ ಒಂದು ಮತದಲ್ಲಿ ಸೋಲು ಕಂಡಿದ್ದರು. ಆದರೆ ಈ ಬಾರಿ ಗೆಲ್ಲುವ ವಿಶ್ವಾಸ ಹೊಂದಿರುವ ಇವರು ಮನೆ ಮನೆಗೆ ತೆರಳಿ ಮತಪ್ರಚಾರದಲ್ಲಿ ತೊಡಗಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಇವರು ನಾನು ಅಂಧನಾಗಿದ್ದರೂ ಸ್ವಂತ ಕಾಲಮೇಲೆ ನಿಂತು ಬೀದಿ ನಾಟಕಗಳನ್ನು ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಾ ಜೀವನ ಕಟ್ಟಿಕೊಂಡಿದ್ದೇನೆ. ಅಂಧನೆಂಬ ನೋವು ನನಗಿಲ್ಲ. ಸಮಾಜಸೇವೆ ಮಾಡುವ ಹಂಬಲ ನನಗಿದೆ. ಅಂಧರೂ ಸಭಲರು ಎಂಬುದನ್ನು ಸಮಾಜಕ್ಕೆ ತೋರಿಸಬೇಕು ನಮ್ಮಿಂದನೂ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸುವುದೇ ನನ್ನ ಉದ್ದೇಶ. ಸಮಾಜದಲ್ಲಿ ಅಂಗ ನೂನ್ಯತೆಯಿಂದ ತಿರಸ್ಕಾರಕ್ಕೊಳಗಾದವರಿಗೆ ಸಹಾಯ ಮಾಡುವ ಹಂಬಲ ನನಗಿದೆ ಎಂದರು.
ಈಗಾಗಲೇ ಇಡೀ ಗ್ರಾಮದಲ್ಲಿ ಇವರಿಗೆ ಜನರು ಬೆಂಬಲ ನೀಡುತ್ತಿದ್ದು ಗೆಲ್ಲಿಸುವ ಭರವಸೆ ಮೂಡಿದೆ. ಜೊತೆಗೆ ಹಲವಾರು ಆಕಾಂಕ್ಷಿಗಳಿರುವ ಈ ಕ್ಷೇತ್ರದಲ್ಲಿ ಇವರು ನಿಂತಿರುವುದಕ್ಕೆ ಬೆಂಬಲ ನೀಡಿ ಹಲವರು ನಾಮಪತ್ರ ಸಲ್ಲಿಸದೆ ಬೆಂಬಲ ನೀಡಿದ್ದು ಇವರಿಗೆ ಆನೆ ಬಲ ಬಂದಂತಾಗಿದೆ.