ಕಲಬುರಗಿ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ನಾಲಿಗೆ ಕಡಿದು ತಂದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ನಗರದಲ್ಲಿ ಮಾಜಿ ಜಿಪಂ ಸದಸ್ಯ ಗುರುಶಾಂತ್ ಪಟ್ಟೇದಾರ್ ವಿವಾದ್ಮಾತಕ ಹೇಳಿಕೆ ನೀಡಿದ್ದಾರೆ.
ಜನವರಿ 26ರೊಳಗೆ ಅನಂತಕುಮಾರ್ ಹೆಗ್ಡೆ ಅವರ ನಾಲಿಗೆಯನ್ನು ಕಡಿದು ತಂದು ಕೊಡಬೇಕು ಎಂದು ಷರತ್ತು ಹಾಕಿದ್ದಾರೆ. ಗುರುಶಾಂತ್ ಪಟ್ಟೇದಾರ್ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬುರ (ಬಿ) ಮಾಜಿ ಜಿಪಂ ಸದಸ್ಯರಾಗಿದ್ದಾರೆ.
ಈ ದೇಶದ ಎಲ್ಲ ಜನರು ಶಾಂತಿಯಿಂದ ಬದುಕುತ್ತಿದ್ದಾರೆ. ಆದರೆ ಬಿಜೆಪಿ ಕೇಂದ್ರ ಮಂತ್ರಿಗಳಾದ ಅನಂತಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ದೇಶದಲ್ಲಿರುವ ಜಾತ್ಯಾತೀತರಿಗೆ ಅವಮಾನ ಮಾಡಿದ್ದಾರೆ. ಭಾರತೀಯ ಸಂವಿಧಾನದ ವಿರೋಧ ಮಾಡುವವರೆಲ್ಲ ದೇಶದ್ರೋಹಿಗಳು. ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮಂತ್ರಿಗಳ ಮೇಲೆ ಪ್ರಧಾನಿ ಮೋದಿಯವರು ಹಿಡಿತ ಕಾಯ್ದುಕೊಳ್ಳಬೇಕು ಎಂದು ಗುರುಶಾಂತ್ ಪಟ್ಟೇದಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಕೊಪ್ಪಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನಂತಕುಮಾರ್ ಹೆಗ್ಡೆ ಅಪ್ಪ-ಅಮ್ಮ ಯಾರೆಂಬುದು ಗೊತ್ತಿಲ್ಲದವರು ಜಾತ್ಯಾತೀತರು ಎಂದು ಹೇಳಿಕೆಯನ್ನು ನೀಡಿದ್ದರು. ಸಚಿವರ ಈ ಹೇಳಿಕೆಗೆ ಕೌಂಟರ್ ಆಗಿ ಪಟ್ಟೇದಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.