ಕಲಬುರಗಿ: ದುಷ್ಕರ್ಮಿಗಳಿಂದ ಬೆಂಕಿ ದಾಳಿಗೆ ಒಳಗಾಗಿದ್ದ ಯುವಕ ಸಾವನ್ನಪ್ಪಿದ್ದಾರೆ.
22 ವರ್ಷದ ಶೇಕ್ ನೂರುದ್ದೀನ್ ಮೃತ ಯುವಕ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಪೋಷಕರು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿ ಕಲಬುರಗಿಯ ರಿಂಗ್ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಜುಲೈ 5ರಂದು ನಗರದ ಇನಾಂದಾರ್ ಕಾಲೇಜು ಬಳಿ ಶೇಕ್ರನ್ನು ಅಪಹರಿಸಿದ್ದ ನಾಲ್ವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಯುವಕನ ಕೊಲೆಗೆ ಯತ್ನಿಸಿದ್ದರು. ಶೇಕ್ ನೂರುದ್ದೀನ್ ಕಲಬುರಗಿ ನಗರದ ಮಿಲ್ಲತ್ ನಗರದ ನಿವಾಸಿಯಾಗಿದ್ದು, ಸಾಮಿಲ್ನಲ್ಲಿ ಕೆಲಸ ಮಾಡಿಕೊಂಡಿದ್ದರು.
ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೊರಟಿದ್ದರು. ಅಂತೆಯೇ ಜಬ್ಬಾರ್ ಪನಶೆನ್ ಹಾಲ್ ಬಳಿ ಆಟೋಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ಎರಡು ಬೈಕ್ ನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ನೂರುದ್ದೀನ್ ಅವರನ್ನು ತಮ್ಮ ಬೈಕಿನಲ್ಲಿ ಅಪಹರಿಸಿ, ನಂತರ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಘಟನೆಯಿಂದ ನರಳಾಡುತ್ತಿದ್ದ ನೂರುದ್ದೀನ್ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೇಕ್ ನೂರುದ್ದೀನ್, ಮೈತುಂಬಾ ಸುಟ್ಟಗಾಯಗಳಿಂದ ನರಳಾಡುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.