ಮಂಡ್ಯ: ಜಗಳ ಬಿಡಿಸಲು ಹೋದ ವೇಳೆ ಚಾಕು ಇರಿತಕ್ಕೊಳಕ್ಕಾಗಿ ಗಂಭೀರ ಗಾಯಗೊಂಡ ಯುವಕನೊಬ್ಬ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕೆ.ಮಲ್ಲೇನಹಳ್ಳಿ ಬಳಿ ತಡರಾತ್ರಿ ನಡೆದಿದೆ.
ಬೆಂಗಳೂರಿನ ಮಾಗಡಿ ರಸ್ತೆ ವಾಸಿ ಕಿರಣ್(28) ಮೃತ ದುರ್ದೈವಿ ಯುವಕ. ಮೃತ ಕಿರಣ್ ಭಾನುವಾರ ರಾತ್ರಿ ಪತ್ನಿಯ ಅಣ್ಣನಿಗೆ ಟಾರ್ಪಲ್ ಕೊಡಲು ಪತ್ನಿ ಜೊತೆ ಬಂದಿದ್ದರು. ಈ ವೇಳೆ ಕ್ಷುಲಕ ಕಾರಣಕ್ಕೆ ಪತ್ನಿಯ ಅಣ್ಣನೊಂದಿಗೆ ಬೇರೆ ಯುವಕರು ಜಗಳವಾಡ್ತಿದ್ರು. ಹೀಗಾಗಿ ಕಿರಣ್ ಜಗಳ ಬಿಡಿಸಲೆಂದು ತೆರಳಿದ್ದರು. ಇದೇ ಸಂದರ್ಭದಲ್ಲಿ ಯುವಕರು ಕಿರಣ್ಗೆ ಚಾಕು ಇರಿದು ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆಯಿಂದ ಗಂಭೀರ ಗಾಯಗೊಂಡ ಕಿರಣ್ ನನ್ನು ನಾಗಮಂಗಲ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ಬಿ.ಜಿ ನಗರದ ಎಐಎಂಎಸ್ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಈ ಸಂಬಂಧ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.