ಚಿಕ್ಕಬಳ್ಳಾಪುರ: ಒಂದೇ ಹುಡುಗಿಯನ್ನ ಇಬ್ಬರು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರೇಮಿಗಳ ದಿನವೇ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಹಳೆ ದ್ವೇಷಕ್ಕಾಗಿ ತಾನೇ ಕೊಲೆ ಮಾಡಿದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.
ವಿಡಿಯೋದಲ್ಲಿ ಏನಿದೆ?: ಹರೀಶ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಬಳಿಕ ಸಂತೋಷ್ ಸ್ಥಳದಿಂದ ಪರಾರಿಯಾಗಿದ್ದನು. ಹರೀಶ್ ನಿಂದ ನನಗೆ ಪ್ರಾಣ ಬೆದರಿಕೆ ಇತ್ತು. ಒಂದು ದಿನ ಕಾರಿನಿಂದ ಗುದ್ದಿ ಕೊಲೆ ಮಾಡಲು ಪ್ರಯತ್ನಿಸಿದ್ದನು. ಆದ್ದರಿಂದ ಹಳೆ ದ್ವೇಷ ಹಿನ್ನೆಲೆಯಲ್ಲಿ ನಾನು ಆತನನ್ನು ಕೊಲೆ ಮಾಡಿದ್ದೇನೆ. ನಾನು ಪೊಲೀಸರಿಗೆ ಶರಣಾಗಲು ಸಿದ್ಧನಾಗಿದ್ದೇನೆ. ಸದ್ಯ ನಾನು ಶಿಡ್ಲಘಟ್ಟ ಪೊಲೀಸ್ ಠಾಣೆಗೆ ಬಂದಿದ್ದೇನೆ ಎಂದು ವಿಡಿಯೋ ಮಾಡಿ ಪೊಲೀಸರಿಗೆ ಕಳುಹಿಸಿದ್ದಾನೆ.
21 ವರ್ಷದ ಹರೀಶ್ ಸ್ನೇಹಿತನಿಂದಲೇ ಕೊಲೆಯಾದ ದುರ್ದೈವಿ ಯುವಕ. ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕಂಚಿಗನಹಾಳ ಗ್ರಾಮದಲ್ಲಿ ನಡೆದಿತ್ತು. ಮಂಗಳವಾರ ತಡರಾತ್ರಿ ಹರೀಶ್ ಸ್ನೇಹಿತ ಅಂಬರೀಶ್ ಎಂಬವರ ಜೊತೆ ಗ್ರಾಮದ ರಸ್ತೆಯಲ್ಲಿ ನಡೆದುಕೊಂಡು ಹೊಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಸಂತೋಷ್, ಹರೀಶ್ ಕತ್ತು ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಹರೀಶ್ ಕುಸಿದು ಬಿದ್ದು ಸ್ಥಳದಲ್ಲೇ ಒದ್ದಾಡಿದ್ದಾರೆ. ಈ ವೇಳೆ ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ ಹರೀಶ್ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಇದನ್ನು ಓದಿ: ಕತ್ತು, ಹೊಟ್ಟೆಗೆ ಚಾಕುವಿನಿಂದ ಇರಿದು ಸ್ನೇಹಿತನಿಂದ್ಲೇ ಯುವಕನ ಬರ್ಬರ ಕೊಲೆ