ಬೆಂಗಳೂರು: ಸ್ಯಾಂಡಲ್ ವುಡ್ ನಟ ಹುಚ್ಚ ವೆಂಕಟ್ ಮೇಲೆ ಯುವಕನೊಬ್ಬ ನಡುರಸ್ತೆಯಲ್ಲೇ ಹಲ್ಲೆ ಮಾಡಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ರಾತ್ರಿ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಏನಿದು ಘಟನೆ?: ರಾತ್ರಿ ಊಟ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ನಟ ವೆಂಕಟ್ ರನ್ನು ರೇಗಿಸಿದ್ದಾನೆ. ಈ ವೇಳೆ ವೆಂಕಟ್ ಆತನಿಗೆ ಸೈಲೆಂಟಾಗಿ ಬುದ್ಧಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕ ತನ್ನ ಕೈಯಲಿದ್ದ ಹೆಲ್ಮೆಟ್ ನಿಂದ ವೆಂಕಟ್ ತಲೆಗೆ ಹಲ್ಲೆ ಮಾಡಿದ್ದಾನೆ. ಹೆಲ್ಮೆಟ್ ನಿಂದ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತು ಹುಚ್ಚ ವೆಂಕಟ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಯಾವುದೋ ಒಂದು ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ ಗಲಾಟೆ ಶುರುವಾಯ್ತು. ಅವರು ಡ್ರಿಂಕ್ಸ್ ಮಾಡಿದ್ರು. ಆ ಬಳಿಕ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದೇವೆ ಅಂತ ಹೇಳಿದ್ರು.
ಗಲಾಟೆಗಳು ನನಗೆ ಮಾಮೂಲಿಯಾಗಿದೆ. ಕುಡಿದಿದ್ರಿಂದ ಆತ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಯುವಕ ಸಾರಿ ಕೇಳಿದ್ದಾನೆ. ಈ ವಿಚಾರವನ್ನು ದೊಡ್ಡದು ಮಾಡಬೇಡಿ. ಗಲಾಟೆ, ಹಲ್ಲೆಗಳು ನಮಗೆ ದೊಡ್ಡ ವಿಚಾರವಲ್ಲ. ಒಂದು ಸಮಾಜ ಅಂತ ಹೋದಾಗ ಇದೆಲ್ಲ ಮಾಮೂಲಿ, ಹಲ್ಲೆಗಳು ನಡೆಯುತ್ತವೆ. ಅದನ್ನು ಎದುರಿಸಬೇಕು ಅಂತ ಅಂದ್ರು.
ಪೊಲೀಸ್ ರಕ್ಷಣೆ ತಗೊಂಡಿಲ್ಲ. ಸೆಕ್ಯುರಿಟಿ ಗಾರ್ಡ್ ಗಳಿಲ್ಲ. ಹೀಗೆ ಯಾರಿಲ್ಲದೇ ಒಬ್ಬನೇ ಒಡಾಡುತ್ತಿದ್ದೀನಿ. ಹೀಗಾಗಿ ಒಂದೊಂದು ಬಾರಿ ಹೀಗಾಗುತ್ತೆ. ಯುವಕ ನನ್ನ ಮೇಲೆ ಹಲ್ಲೆ ಮಾಡಿದ್ದಕ್ಕೆ ನಾನು ಹೊಡೆದಿದ್ದೀನಿ. ಹೀಗಾಗಿ ಈ ವಿಚಾರ ಇಲ್ಲೇ ಬಿಟ್ಬಿಡಿ ಅಂತ ಹುಚ್ಚಾ ವೆಂಕಟ್ ಮನವಿ ಮಾಡಿಕೊಂಡಿದ್ದಾರೆ.